ಬೆಂಗಳೂರು: ‘ಮಹಿಳೆಯರಿಗಾಗಿ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಮಹಿಳೆಯರ ಸಂಖ್ಯೆಯೇ ಕ್ಷೀಣಿಸುತ್ತಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಲೇಖಕಿಯರ ಸಂಘ, ನಿರಂತರ ಸಾಯಿ ಕಮ್ಯುನಿಕೇಷನ್ಸ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಇಂದಿರಾ ದತ್ತಿ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಹಿಳಾ ಪರ ಕಾರ್ಯಕ್ರಮಗಳನ್ನು ನಡೆಸಲು ಪರಿಷತ್ತು ಸದಾ ಸಿದ್ಧವಿದೆ. ಚಿಕ್ಕಮಗಳೂರಿನಲ್ಲಿ ಎರಡು ದಿನಗಳ ಮಹಿಳಾ ಸಾಹಿತ್ಯ ಸಮ್ಮೇಳನ ಹಾಗೂ ಬೆಂಗಳೂರಿನಲ್ಲಿ ಒಂದು ದಿನದ ಸಮ್ಮೇಳನ ನಡೆಸಲು ಚಿಂತನೆ ನಡೆಸಿದೆ. ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪರಿಷತ್ತಿನಲ್ಲಿ ಸಾಕಷ್ಟು ಹಣ ಲಭ್ಯವಿದ್ದು, ಲೇಖಕಿಯರ ಸಂಘ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುನಂದ ರು. ಬಸಪ್ಪ (ಲೀಲಾದೇವಿ ಆರ್.ಪ್ರಸಾದ್), ಡಾ. ಕೆ.ಆರ್.ಸಂಧ್ಯಾರೆಡ್ಡಿ (ಉಷಾ ಪಿ.ರೈ), ಗೀತಾ ಶೆಣೈ (ನಾಗಮಣಿ ಎಸ್.ರಾವ್), ಬಿ.ಸ್ವರ್ಣಗೌರಿ (ಇಂದಿರಾ ಶಿವಣ್ಣ) ಮತ್ತು ಎಸ್.ಕೆ.ವೈಜಯಂತಿ (ಎಲ್.ವಿ. ಶಾಂತಕುಮಾರಿ) ಅವರು ರಚಿಸಿದ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.