ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಕ್ರಮ ಹಣ ಡಿಕೆಶಿಗೆ ಸೇರಿದ್ದು’

ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರತಿಪಾದನೆ
Last Updated 3 ಜೂನ್ 2019, 20:09 IST
ಅಕ್ಷರ ಗಾತ್ರ

ಬೆಂಗಳೂರು: ‘ಆದಾಯ ತೆರಿಗೆ (ಐ.ಟಿ) ದಾಳಿಗೆ ಸಂಬಂಧಿಸಿದಂತೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಇತರ ನಾಲ್ವರ ವಿರುದ್ಧ ದಾಖಲಿಸಿರುವ ಐ.ಟಿ ದೂರು ಕಾನೂನು ಬದ್ಧವಾಗಿದೆ‘ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ ಜನಪ್ರತಿನಿಧಿಗಳ ಕೋರ್ಟ್‌ಗೆ ತಿಳಿಸಿದರು.

‘ನಮ್ಮನ್ನು ಪ್ರಕರಣದಿಂದ ಕೈಬಿಡಬೇಕು‘ ಎಂದು ಕೋರಿ ಆರೋಪಿಗಳಾದ ಡಿ.ಕೆ.ಶಿವಕುಮಾರ್, ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ಸಲ್ಲಿಸಿರುವ ಅರ್ಜಿಗಳನ್ನು, ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಸೋಮವಾರ ವಿಚಾರಣೆ ನಡೆಸಿದರು.

ಐ.ಟಿ ಪರ ವಾದ ಮಂಡಿಸಿದ ನಾವದಗಿ, ‘ಆರೋಪಿಗಳು, ಬೆಂಗಳೂರಿನಿಂದ ನವದೆಹಲಿಯ ಸಫ್ಧರ್ ಜಂಗ್ ಎನ್‌ಕ್ಲೇವ್‌ಗೆ ಹವಾಲಾ ಮೂಲಕ ಹಣ ಸಾಗಣೆ ಮಾಡಿದ್ದಾರೆ. ಈ ಚಟುವಟಿಕೆಯನ್ನು ಕೆ.ಜಿ ಎಂದು ಕೋಡ್ ವರ್ಡ್‌ಗಳ ಮೂಲಕ ನಿರ್ವಹಿಸಿರುವುದು ಆರೋಪಿಗಳ ಹೇಳಿಕೆಯಲ್ಲಿ ಬಹಿರಂಗವಾಗಿದೆ‘ ಎಂದು ವಿವರಿಸಿದರು.

‘ದಾಳಿ ವೇಳೆ ದೊರೆತಿರುವ ಮೊತ್ತಕ್ಕೆ ಕಾನೂನು ಬದ್ಧ ಲೆಕ್ಕ ನೀಡುವಲ್ಲಿ ಆರೋಪಿಗಳು ವಿಫಲವಾಗಿದ್ದಾರೆ ಮತ್ತು ಇವರೆಲ್ಲಾ ಅಪರಾಧಿಕ ಒಳಸಂಚು ನಡೆಸಿದ್ದಾರೆ’ ಎಂದರು.

ವಿಚಾರಣೆಯನ್ನು ಮಂಗಳವಾರಕ್ಕೆ (ಜೂ.4) ಮುಂದೂಡಲಾಗಿದೆ.

2017ರ ಆಗಸ್ಟ್‌ 2ರಂದು ಐ.ಟಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್‌ಗೆ ಸೇರಿದ ಬೆಂಗಳೂರು ಮತ್ತು ನವದೆಹಲಿಯ ಮನೆಗಳ ಮೇಲೆ ದಾಳಿ ಮಾಡಿ ₹ 8,59,69,100 ಮೊತ್ತವನ್ನು ಜಪ್ತಿ ಮಾಡಿದ್ದಾರೆ.

ಡಿ.ಕೆ.ಶಿವಕುಮಾರ್, ಸಚಿನ್‌ ನಾರಾಯಣ, ಸುನಿಲ್‌ ಕುಮಾರ್‌ ಶರ್ಮ, ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ವಿರುದ್ಧ ಆದಾಯ ತೆರಿಗೆ ಕಾಯ್ದೆ–1961ರ ಕಲಂ 277 ಮತ್ತು 278 ಹಾಗೂ ಭಾರತೀಯ ದಂಡ ಸಂಹಿತೆಯ ಕಲಂ 120 ಬಿ, 193 ಹಾಗೂ 199ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT