ಹುಬ್ಬಳ್ಳಿ: ಕಳಸಾ ಕಾಲುವೆಗೆ ನಿರ್ಮಾಣ ಮಾಡಿರುವ ತಡೆಗೋಡೆಯನ್ನು ತೆರವುಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ನಾವೇ ತಡೆಗೋಡೆ ಒಡೆದು ಹಾಕುತ್ತೇವೆ ಎಂದು ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ಅಧ್ಯಕ್ಷ ಸಿದ್ದಣ್ಣ ಕೆ.ಜಿ. ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ. ಅದಕ್ಕೆ ಪ್ರತಿಕ್ರಿಯೆ ಬರದಿದ್ದರೆ, ಮಾರ್ಚ್ 15ರಂದು ಹೋರಾಟಗಾರರೆಲ್ಲ ಬೆಳಗಾವಿಯಲ್ಲಿ ಸಭೆ ಸೇರಿ ತೀರ್ಮಾನ ಮಾಡುತ್ತೇವೆ ಎಂದು ಅವರು ಹೇಳಿದರು.
ನ್ಯಾಯಮಂಡಳಿ ತೀರ್ಪು ನೀಡಿದ ನಂತರ ರಾಜ್ಯ ಸರ್ಕಾರ ಹೋರಾಟಗಾರರನ್ನು ಕರೆದು ಮುಂದಿನ ನಡೆಯ ಬಗ್ಗೆ ಚರ್ಚಿಸಬೇಕಾಗಿತ್ತು. ಆದರೆ ಯಾರೊಂದಿಗೂ ಮಾತನಾಡದೆ ಸಲಹೆ ಪಡೆಯದೇ ಮೇಲ್ಮನವಿ ಸಲ್ಲಿಸಿದೆ ಎಂದು ಅವರು ತಿಳಿಸಿದರು.
ಕಳಸಾ ಬಂಡೂರಿ ಮಾತ್ರವಲ್ಲ, ಕಬ್ಬು ಬೆಳೆಗಾರರ, ಈರುಳ್ಳಿ, ತರಕರಿ ಬೆಳೆಗಾರು ಹಾಗೂ ಈ ಭಾಗದ ರೈತರ ಎಲ್ಲ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದರು.
ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಮುಖಂಡರಾದ ಬಾಬಾಜಾನ್ ಮುಧೋಳ, ಕರಿಯಪ್ಪ ಹೊನ್ನಾಪುರ, ಎ.ಎಸ್. ಪೀರಜಾದೆ, ಇಲಿಯಾಸ್ ಪಾಟೀಲ, ರಮೇಶ್ ಬೋಸ್ಲೆ ಇದ್ದರು.
ಕರ್ನಾಟಕ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ಅಧ್ಯಕ್ಷ ಸಿದ್ದಣ್ಣ ಕೆ.ಜಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.