ಮಡಿಕೇರಿ: ‘ತಾಲ್ಲೂಕಿನ ಕೊಳಗದಾಳು, ಚೇರಂಬಾಣೆ, ಬೆಟ್ಟತ್ತೂರು ಮಾರ್ಗವಾಗಿ ಮದೆನಾಡು ಮೂಲಕ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮರ ಸಾಗಣೆ ಮಾಡುವ ಭಾರಿ ವಾಹನಗಳಿಗೆ ಅವಕಾಶ ನೀಡಬಾರದು’ ಎಂದು ಬೆಟ್ಟತ್ತೂರು ಗ್ರಾಮಸ್ಥಕೆ.ಎಸ್.ಪುಟ್ಟಯ್ಯ ಆಗ್ರಹಿಸಿದರು.
ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ರಸ್ತೆ ವಾಹನಗಳ ಓಡಾಟದಿಂದ ತೀರಾ ಹದಗೆಟ್ಟಿದೆ. ಚೇರಂಬಾಣೆಯಿಂದ 7 ಕಿ.ಮೀ. ದೂರವಿರುವ ಕಾಫಿ ತೋಟದಲ್ಲಿ ಮರಗಳನ್ನು ಕಡಿದು ಭಾರಿ ವಾಹನಗಳ ಮೂಲಕ ಮರಗಳನ್ನು ಇದೇ ರಸ್ತೆಯಲ್ಲಿ ಸಾಗಿಸಲಾಗುತ್ತಿದೆ. ಈ ಬಗ್ಗೆ ಜಿ.ಪಂ ಜಿಲ್ಲಾಡಳಿಕ್ಕೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನವ್ಯಕ್ತಪಡಿಸಿದರು.
ರಸ್ತೆ ದುರಸ್ತಿಗೆ ಆಗ್ರಹ
ಚೇರಂಬಾಣೆ– ಮದೆನಾಡು ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಮರು ಡಾಂಬರೀಕರಣ ಮಾಡದೇ ಸಾಕಷ್ಟು ವರ್ಷ ಕಳೆದಿದೆ. ಇನ್ನು ರಸ್ತೆ ದುರಸ್ತಿ ಕಾರ್ಯವೂ ಆಗುತ್ತಿಲ್ಲ ಎಂದು ದೂರಿದರು.
ಪ್ರತಿಭಟನೆ ಎಚ್ಚರಿಕೆ
ಇದೇ 31ರಂದು ಈ ಭಾಗದ 5 ಗ್ರಾಮಸ್ಥರು ರಸ್ತೆ ದುರಸ್ತಿ ಹಾಗೂ ಭಾರಿ ವಾಹನಗಳಿಗೆ ನಿಷೇಧ ಮಾಡುವ ಸಂಬಂಧ ಕೊಳದಾಳುವಿನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು ಎಂದು ಕಾವೇರಿ ಸೇನೆ ಅಧ್ಯಕ್ಷ ರವಿ ಚಂಗಪ್ಪ ಎಚ್ಚರಿಸಿದರು.