ಮಡಿಕೇರಿ: ಮಡಿಕೇರಿಯ ಕೋಟೆ ನಿರ್ವಹಣೆಯ ಕೊರತೆಯಿಂದ ಅವನತಿಯ ಆತಂಕದ ಜತೆಗೆ ಕೋಟೆ ನೋಡಲೆಂದು ಬರುವ ಪ್ರವಾಸಿಗರಿಗೆ ಕೋಟೆಯ ದುಸ್ಥಿತಿ ಕಂಡು ನಿರಾಸೆಯಾಗಿದ್ದಾರೆ.
ನಗರಕ್ಕೆ ಬರುವ ಹೆಚ್ಚು ಪ್ರವಾಸಿಗರು ರಾಜಸೀಟ್ ನೋಡಿಕೊಂಡು ಐತಿಹಾಸಿಕ ಕೋಟೆಯ ಸೊಬಗನ್ನು ನೋಡಲು ಇಲ್ಲಿಯ ಅರಮನೆಕಡೆ ಮುಖ ಮಾಡುತ್ತಾರೆ, ಆದರೆ ಇಲ್ಲಿಯ ಅರಮನೆಯೊಳಗೆ ಪ್ರವೇಶ ಇಲ್ಲದ ಕಾರಣ ಪ್ರವಾಸಿಗರು ಆವರಣ ಸುತ್ತ ಸುತ್ತಿ ನಿರಾಸೆಯಿಂದಲೇ ತೆರಳುತ್ತಿರುವುದು ಕಂಡು ಬರುತ್ತಿದೆ.
‘ಕೋಟೆಗೆ ಸಾಕಷ್ಟು ಬಾರಿ ಪ್ರವಾಸಿಗರನ್ನು ಕರೆದುಕೊಂಡು ಬಂದಿದ್ದೆನೆ. ಬಂದಾಗೆಲ್ಲ ಪ್ರವಾಸಿಗರು ಅರಮನೆ ಪ್ರವೇಶವಿಲ್ಲ ಎಂದು ತಿಳಿದು ಮರುಗುತ್ತಾರೆ. ಇನ್ನು ಮ್ಯೂಸಿಯಂನಲ್ಲಿಯೂ ಆಕರ್ಷಣೆ ಇಲ್ಲದಿರುವುದರಿಂದ ನಿರಾಸೆಯಲ್ಲಿಯೇ ವಾಪಸ್ಸು ಹೋಗುತ್ತಾರೆ ಎಂದು ಬೆಂಗಳೂರಿನ ಕಾರು ಚಾಲಕ ಹರೀಶ್ ಹೇಳುತ್ತಾರೆ.
‘ಪ್ರವಾಸಿ ತಾಣ ಎಂದ ಮೇಲೆ ಅರಮನೆ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು. ಹೋಗದಂತೆ ನಿರ್ಬಂಧ ಮಾಡಿರುವ ಕ್ರಮ ಸರಿಯಲ್ಲ. ಹೊರ ಆವರಣದಿಂದ ಅರಮನೆ ಪಾಲು ಬಿದ್ದ ಬೃಹತ್ ಮನೆಯಂತೆ ಕಾಣುತ್ತದೆ. ಅರಮನೆಯ ಇತಿಹಾಸದ ಬಗ್ಗೆ ಜನರಿಗೆ ತಿಳಿಸುವುದು ಸರ್ಕಾರದ ಕರ್ತವ್ಯ’ ಎಂದು ಉತ್ತರ ಪ್ರದೇಶ ಮೂಲದ ಪ್ರವಾಸಿಗ ಅಶೋಕ್ ಹೇಳಿದರು.
‘ಅರಮನೆಯ ಕಲ್ಪನೆಯಲ್ಲೇಬಂದೆವು. ಆದರೆ, ಇಲ್ಲಿ ಅರಮನೆಯ ಸ್ಥಿತಿಯನ್ನು ನೋಡಿ ವಿಷಾದವಾಯಿತು. ಇಂತಹ ಕಟ್ಟಡವನ್ನು ನಮಗೆ ಉಳಿಸಲು ಸಾಧ್ಯವಾಗುತ್ತಿಲ್ಲ. ಕಣ್ಣೆದುರೇ ಕುಸಿಯುತ್ತಿದ್ದರೂ ಅದರ ರಕ್ಷಣೆಗೆ ಯಾರೂ ಮುಂದಾಗದಿರುವುದು ದುರಂತ’ ಎಂದು ಸುಳ್ಯದ ನಿವಾಸಿ ಶಿವ ಪ್ರಸಾದ್ ಹೇಳಿದರು.
‘ಕೋಟೆ ಉಳಿಸಿ’ ಅಭಿಯಾನ: ಮಡಿಕೇರಿ ಕೋಟೆ ಉಳಿಸಿಕೊಳ್ಳುವುದಕ್ಕೆ ಜನರೆ ಮುಂದೆ ಬರಬೇಕಿದೆ. ಆ ನಿಟ್ಟಿನಲ್ಲಿ ‘ಕೋಟೆ ಉಳಿಸಿ’ ಅಭಿಯಾನವನ್ನು ನಡೆಸಲು ಗ್ರೀನ್ ಸಿಟಿ ಫಾರಂ ತಯಾರಿ ನಡೆಸಲಾಗುತ್ತಿದೆ ಎಂದು ಫಾರಂ ಅಧ್ಯಕ್ಷ ಚೆಯ್ಯಂಡ ಸತ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಹಿಂದೆ ಕೋಟೆಯೊಳಗೆ ಗಿಡಗಂಟಿಗಳು ಬೆಳೆದು ಕಾಡು ರೀತಿಯಲ್ಲಿದ್ದ ಆವರಣವನ್ನು ಗ್ರೀನ್ ಸಿಟಿ ಫೋರಂ ಸಂಘಟನೆ ಎರಡು ವಾರ ಸ್ವಚ್ಛತೆಅಭಿಯಾನ ನಡೆಸುವ ಮೂಲಕ ಸ್ವಚ್ಛಗೊಳಿಸಲಾಗಿತ್ತು. ವಿವಿಧ ಸಂಘ ಸಂಸ್ಥೆಗಳ 600ಕ್ಕೂ ಹೆಚ್ಚು ಮಂದಿ ಶ್ರಮದಾನದಲ್ಲಿ ಪಾಲ್ಗೊಂಡು ಕೋಟೆ ಆವರಣವನ್ನು ಶುಚಿಗೊಳಿಸಿದ್ದೆವು ಎಂದು ಸತ್ಯ ನೆನಪಿಸಿದರು.
ಸರ್ಕಾರಿ ಕಚೇರಿಗಳು ಅರಮನೆಯೊಳಗೆ ಇರುವುದರಿಂದ ಪುರಾತತ್ವ ಇಲಾಖೆಗೆ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಜಿಲ್ಲಾ ಪಂಚಾಯಿತಿ ಕಚೇರಿಗಳನ್ನು ಶೀಘ್ರದಲ್ಲಿ ನೂತನ ಜಿಲ್ಲಾ ಪಂಚಾಯಿತಿ ಸಂಕೀರ್ಣಕ್ಕೆ ಸ್ಥಳಾಂತರವಾದರೆ ಮಾತ್ರ ಅರಮನೆ ಅಭಿವೃದ್ಧಿಕಾಣಲು ಸಾಧ್ಯ ಎಂದು ಸತ್ಯ ಹೇಳುತ್ತಾರೆ.
ಮಳೆಗಾಲದಲ್ಲಿ ಇಲ್ಲಿಯ ಕಚೇರಿಗಳು ಸುರಕ್ಷಿತವಾಗಿಲ್ಲ. ಜಿಲ್ಲಾಡಳಿತ ಈ ಬಗ್ಗೆ ಎಚ್ಚೆತ್ತುಕೊಂಡು ಕಚೇರಿಗಳನ್ನು ಮೊದಲು ಸ್ಥಳಾಂತರಿಸಬೇಕಿತ್ತು. ಶಾಸಕರುಗಳ ಕಚೇರಿಗಳೇ ಇದರೊಳಗೆ ಇದ್ದರೂಸರ್ಕಾರವನ್ನು ಎಚ್ಚರಿಸುವ ಕೆಲಸ ಆಗಿಲ್ಲ ಎಂದು ನಗರ ಹಿತ ರಕ್ಷಣ ವೇದಿಕೆ ಅಧ್ಯಕ್ಷ ರವಿ ಗೌಡ ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.