ಬೆಂಗಳೂರು: ‘ಭ್ರಷ್ಟಾಚಾರರಹಿತ ಮತ್ತು ಜನರಿಗಾಗಿ 24 ಗಂಟೆ ದುಡಿಯುವ ಸರ್ಕಾರವೇ ನಮ್ಮ ಗುರಿ’ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರವಾಗಿ ಭಾನುವಾರ ಮತ ಯಾಚಿಸಿದರು. ‘ದೇಶದಲ್ಲಿ ಉತ್ತಮ ಕೆಲಸಗಳಿಗಾಗಿ ವಿಶ್ವಾಸಾರ್ಹ ಸರ್ಕಾರ ರಚನೆಯಾಗಬೇಕಿದೆ. ಕರ್ನಾಟಕದಲ್ಲಿ ಭ್ರಷ್ಟಾಚಾರರಹಿತ ಸರ್ಕಾರ ಅಸ್ತಿತ್ವಕ್ಕೆ ಬರಬೇಕಿದೆ. ಸಾರ್ವಜನಿಕರ ಹಿತಾಸಕ್ತಿಗಳಿಗಾಗಿ ಭ್ರಷ್ಟಾಚಾರರಹಿತ ಸರ್ಕಾರಕ್ಕಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಬರಬೇಕಿದೆ’ ಎಂದರು.
ನಿರ್ಮಲಾ ಸೀತಾರಾಮನ್ ಅವರು ಇಂಗ್ಲಿಷ್ನಲ್ಲಿ ಮತ ಕೇಳಿದರು. ಅದಕ್ಕೆ ಕೆಲವು ಮಹಿಳೆಯರು ‘ಕನ್ನಡದಲ್ಲಿ ಮತ ಯಾಚನೆ ಮಾಡಬೇಕು’ ಎಂದು ಒತ್ತಾಯಿಸಿದರು. ‘ನನಗೆ ಕನ್ನಡ ಬರುವುದಿಲ್ಲ. ಹಾಗಾಗಿ, ಇಂಗ್ಲಿಷ್ನಲ್ಲಿ ಮತ ಕೇಳುತ್ತಿದ್ದೇನೆ’ ಎಂದು ನಿರ್ಮಲಾ ಸಮಜಾಯಿಷಿ ನೀಡಿದರು.