ರಾಯಚೂರು: ಪಶುವೈದ್ಯೆ ಡಾ.ಪ್ರಿಯಾಂಕರೆಡ್ಡಿಯನ್ನು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಘಟನೆಯನ್ನು ವಿರೋಧಿಸಿ ಕರ್ನಾಟಕ ಪಶು ವೈದ್ಯಕೀಯ ಸಂಘದ ನೇತೃತ್ವದಲ್ಲಿ ಮೌನ ಮೆರವಣಿಗೆ ನಡೆಸಿತು.
ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೌನ ಮೆರವಣಿಗೆ ನಡೆಯಿತು.
ಜಿಲ್ಲಾಧಿಕಾರಿ ಕಚೇರಿಯ ಸ್ಥಾನಿಕ ಅಧಿಕಾರಿಗಳ ಮುಖಾಂತರ ತೆಲಂಗಾಣ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಡಾ.ಪ್ರಿಯಾಂಕರೆಡ್ಡಿ ಚಿಕಿತ್ಸೆ ನೀಡಿ ಹಿಂದಿರುಗಿ ಬರುವಾಗ ಅವರನ್ನು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ಆರೋಪಿಗಳಿಗೆ ಕೂಡಲೇ ಶಿಕ್ಷೆ ವಿಧಿಸಬೇಕು. ಮೂಕ ಪ್ರಾಣಿಗಳ ರಕ್ಷಣೆಗೆ ಹಗಲು ರಾತ್ರಿ ಸೇವೆ ಸಲ್ಲಿಸುತ್ತಿರುವ ಪಶು ವೈದ್ಯರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪಶುವೈದ್ಯರ ಸಂಘದ ಗೌರವಾಧ್ಯಕ್ಷ ಡಾ.ತಿಪ್ಪೆಸ್ವಾಮಿ.ಜಿ, ಅಧ್ಯಕ್ಷ ಡಾ.ಅಮರೇಗೌಡ ಪಾಟೀಲ, ಉಪಾಧ್ಯಕ್ಷ ಡಾ.ಬಸವರಾಜ, ಡಾ.ಯಮನಪ್ಪ ವಾಲ್ಮೀಕಿ, ಡಾ.ಶಶಿಧರ ಸೊಪ್ಪಿನಮಠ, ಡಾ.ಪ್ರದೀಪ ಕುಮಾರ, ಡಾ.ಮನೋಜ, ಪಶುವೈದ್ಯರು ಮತ್ತು ಸಿಬ್ಬಂದಿ ಇದ್ದರು.