ಬೆಂಗಳೂರು: ಬ್ಯಾಡರಹಳ್ಳಿ ಸಮೀಪದ ತಿಗಳರಪಾಳ್ಯದಲ್ಲಿ ಹಳೆಯ ಕಟ್ಟಡ ಕೆಡುವುತ್ತಿದ್ದ ವೇಳೆ, ಅವಶೇಷಗಳ ಅಡಿ ಸಿಲುಕಿ ಸ್ಥಳೀಯರಾದ ಲಕ್ಷ್ಮಣ (60) ಮತ್ತು ಕಾರ್ಮಿಕ ಶಂಕರಪ್ಪ (35) ಗುರುವಾರ ಮೃತಪಟ್ಟಿದ್ದಾರೆ.
ದುರ್ಘಟನೆಯಲ್ಲಿ ರಾಯಚೂರಿನ ಮಲ್ಲಪ್ಪ ಗಾಯಗೊಂಡಿದ್ದಾರೆ. ಅವರನ್ನು ಸುಂಕದಕಟ್ಟೆಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
‘ಕಟ್ಟಡದ ಮಾಲೀಕ ಪ್ರಭು, ಒಂದು ಅಂತಸ್ತಿನ ಹಳೆಯ ಕಟ್ಟಡವನ್ನು ಕೆಡವಿ, ಅದರ ಜಾಗದಲ್ಲಿ ಹೊಸದನ್ನು ನಿರ್ಮಿಸಲು ಯೋಜಿಸಿದ್ದರು. ಕಟ್ಟಡ ನೆಲಸಮಗೊಳಿಸುವ ಕೆಲಸಗುರುವಾರ ನಡೆದಿತ್ತು. ಸಂಜೆ ಅವಘಡ ಸಂಭವಿಸಿತು’ ಎಂದು ಸ್ಥಳೀಯರು ತಿಳಿಸಿದರು.
ಸ್ಥಳೀಯರ ಕರೆ ಮೇರೆಗೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಅವಶೇಷಗಳನ್ನು ತೆರವುಗೊಳಿಸಿ, ಶವಗಳನ್ನು ಹೊರತೆಗೆದರು.
‘ಲಕ್ಷ್ಮಣ ಮತ್ತು ಶಂಕರಪ್ಪ ಸಿಗರೇಟ್ ಸೇದುತ್ತ, ಕಟ್ಟಡ ತೆರವು ಕಾರ್ಯಾಚರಣೆ ನೋಡುತ್ತಿದ್ದರು. ಅಚಾನಕ್ಕಾಗಿ ಅವರ ಮೇಲೆ ಗೋಡೆ ಕುಸಿದು ಮೃತಪಟ್ಟರು’ ಎಂದು ದೊಡ್ಡಬಿದರಕಲ್ಲು ವಾರ್ಡ್ನ ಪಾಲಿಕೆ ಸದಸ್ಯ ವಾಸುದೇವ್ ತಿಳಿಸಿದರು.