ಬೆಂಗಳೂರು: ‘ಭಾರತೀಯ ಪರಂಪರೆ, ಸಂಸ್ಕೃತಿ ಹಾಗೂ ಧರ್ಮದ ವರ್ಧಂತಿಗೆ ಪಣ ತೊಡಬೇಕು’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಸಲಹೆ ನೀಡಿದರು.
ನಗರದಲ್ಲಿ ನಡೆದ ವರ್ಧಂತ್ಯುತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
‘ಶ್ರೀಗುರುಗಳ, ಪೀಠದ ಸೇವೆ ಯಿಂದ ಸಂತಸ ಹಾಗೂ ಸಾರ್ಥಕತೆ ಸಿಗುವುದಾದರೆ ಇನ್ನಷ್ಟು ಸೇವೆ ಮಾಡಬೇಕು.ಪೀಠದ ಸಂಕಲ್ಪ ಮತ್ತು ಧ್ಯೇಯಕ್ಕೆ ಬದ್ಧರಾಗುವುದೇ ನಿಜವಾದ ಸೇವೆ. ವಿಶ್ವದ ಏಕೈಕ ಗೋಸ್ವರ್ಗ ನಿರ್ಮಿಸಲಾಗಿದೆ. ಇದೀಗ 1,300 ವರ್ಷದ ಶಂಕರ ಪರಂಪರೆಗೆ ಗೌರವ ತರುವಂಥ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಂಥ ಸಾರ್ಥಕ ಕಾರ್ಯ ಕೈಗೊಳ್ಳಲಾಗುತ್ತಿದೆ’ ಎಂದರು.
‘ನಮ್ಮ ಪೀಠ ಸಮಾಜದ ಶ್ರೇಯಸ್ಸಿಗೆ ದೊಡ್ಡ ದ್ವಾರವಾಗಿ ಪರಿಣಮಿಸಬೇಕು. ಪೀಠದ ಮೂಲಕ ಹಲವು ಮಹತ್ಕಾರ್ಯಗಳನ್ನು ನಡೆಸಬೇಕಿದೆ. ವರ್ಧಂತಿ ಎನ್ನುವುದು ವೃದ್ಧಿ, ವಿಕಾಸವನ್ನು ಸೂಚಿಸುತ್ತದೆ. ನಿರಂತರವಾಗಿ ವೃದ್ಧಿ, ಬೆಳವಣಿಗೆಗಳು ಆಗುತ್ತಿರಬೇಕು’ ಎಂದರು.
ಹೊರನಾಡಿನ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿಗಳಾದ ಭೀಮೇಶ್ವರ ಜೋಶಿ ದಂಪತಿ ಶ್ರೀಗುರುಭಿಕ್ಷಾ ಸೇವೆ ಮತ್ತು ಅಕ್ಕಿಯಿಂದ ತುಲಾಭಾರ ಸೇವೆ ನೆರವೇರಿಸಿದರು.
ವರ್ಧಂತ್ಯುತ್ಸವ ಅಂಗವಾಗಿ ಅರುಣ ಹೋಮ, 48 ಅರುಣ ನಮಸ್ಕಾರ, ಮಾತೆಯರಿಂದ ಮಂಗಳಾರತಿ, ರಾಜರಾಜೇಶ್ವರಿಗೆ ಬಾಗಿನ ಅರ್ಪಣೆ, ಅಷ್ಟೋತ್ತರ ಶತಕುಂಭ ಗಂಗಾಭಿಷೇಕ, ಶ್ರೀರಾಮದೇವರಿಗೆ ಅಷ್ಟಾವಧಾನ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಜತ ಪೀಠಾರೋಹಣವೂ ನಡೆಯಿತು.