ಬೆಂಗಳೂರು: ‘ಜನ ಸಮುದಾಯವು ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ, ಸಹಕಾರ ಮತ್ತು ಅವಕಾಶ ಕಲ್ಪಿಸಿಕೊಡುವ ಮೂಲಕ ರಂಗಭೂಮಿಯನ್ನು ಉಳಿಸಬೇಕಾಗಿದೆ’ ಎಂದು ಲೇಖಕಿ ವಿಜಯಮ್ಮ ಅಭಿಪ್ರಾಯಪಟ್ಟರು.
ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್, ಉಲ್ಲಾಳು ವಾರ್ಡ್ ನಾಗರೀಕರ ವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಾಗದೇವನಹಳ್ಳಿಯ ಜ್ಞಾನಭಾರತಿ ಬಡಾವಣೆಯಲ್ಲಿ ಆಯೋಜಿಸಿದ್ದ ‘ವಸಂತ ರಂಗೋತ್ಸವ’ದಲ್ಲಿ ಅವರು ಮಾತನಾಡಿದರು.
‘ರಂಗಭೂಮಿ ಕಲಾವಿದರ ಜೀವನ ಕಷ್ಟದ ಪರಿಸ್ಥಿತಿಯಲ್ಲಿದ್ದರೂ ನೋವನ್ನು ಮನಸ್ಸಿನಲ್ಲಿ ಅದುಮಿಟ್ಟುಕೊಂಡು ಕಲೆಯ ರಸದೌತಣ ಉಣಬಡಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ದಣಿವು ತುಂಬಿರುವ ಮನಸ್ಸುಗಳಿಗೆ ನೆಮ್ಮದಿ ನೀಡುವ ತಾಣ ರಂಗಭೂಮಿಯಾಗಿದೆ’ ಎಂದರು.
ಅಭಿನಯ ತರಂಗ ರಂಗಶಾಲೆ ಪ್ರಾಂಶುಪಾಲರಾದ ಗೌರಿದತ್ತು ಅವರು ರಂಗಗೌರವ ಪ್ರಶಸ್ತಿ ಸ್ವೀಕರಿಸಿ,‘ಬೆಂಗಳೂರು ಮಹಾನಗರ ಸೇರಿದಂತೆ ಎಲ್ಲ ನಗರ, ಪಟ್ಟಣಗಳಲ್ಲಿ ರಂಗಮಂಟಪಗಳಿವೆ. ಅವುಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ.
ರಂಗಭೂಮಿಯಿಂದ ಸಾಹಿತ್ಯ ಶ್ರೀಮಂತವಾಗುತ್ತದೆ’ ಎಂದರು.
ಲೇಖಕ ಬಸವರಾಜ ಸಬರದ, ‘ಯಾವುದೇ ಕಲಾವಿದರಾದರೂ ಶ್ರದ್ಧೆ, ಪ್ರಾಮಾಣಿಕತೆ, ಕಲಿಕೆ, ದಯೆ ಮೈಗೂಡಿಸಿಕೊಂಡಾಗ ಪ್ರತಿಭೆ ಹಾಗೂ ನಾಯಕತ್ವ ಹೊರಹೊಮ್ಮಲು ಸಾಧ್ಯ’ ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತ ಕೃಷಿ ಅಧಿಕಾರಿ ಎಚ್.ಪಿ.ಶೋಭನಾಮೂರ್ತಿ ಅವರಿಗೆ ರಂಗಗೌರವ ಸಲ್ಲಿಸಲಾಯಿತು. ಎಸ್.ಎಸ್.ಎಂ.ಆರ್.ವಿ ಪದವಿ ಕಾಲೇಜು ಹಾಗೂ ರಂಗಾಂತರಂಗ ತಂಡವು ಕಾಳಿದಾಸರ ‘ಮೇಘಧೂತ’ ಕಾವ್ಯದ ಕಥಾಭಾಗವನ್ನು ಪ್ರದರ್ಶಿಸಿದರು.