ದಾಬಸ್ಪೇಟೆ: ಇಲ್ಲಿನ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಎಡೇಹಳ್ಳಿ ಗ್ರಾಮದ ಗೋಮಾಳದಲ್ಲಿ ಗುರುವಾರ ಬೆಳಿಗ್ಗೆ ನೂರಕ್ಕೂ ಹೆಚ್ಚು ಅನಧಿಕೃತ ಶೆಡ್ಗಳು ಪ್ರತ್ಯಕ್ಷವಾಗಿದ್ದವು.
ಈ ವಿಷಯ ತಿಳಿದು ತೆರವುಗೊಳಿಸಲು ಬಂದ ತಹಶೀಲ್ದಾರ್ ಮತ್ತು ಶೆಡ್ ನಿರ್ಮಾಣದಾರರ ನಡುವೆ ಮಾತಿನ ಚಕಮಕಿ ನಡೆದು, ಪರಿಸ್ಥಿತಿಯು ಕೈ–ಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಇಲ್ಲಿನ ಸರ್ವೇ ನಂ.61ರಲ್ಲಿ 12 ಎಕರೆ ಹಾಗೂ ಸರ್ವೇ ನಂ.66ರಲ್ಲಿ 26 ಎಕರೆ ಸೇರಿದಂತೆ ಒಟ್ಟು 38 ಎಕರೆ ಗೋಮಾಳವಿದೆ. ಇದರಲ್ಲಿ 2 ಎಕರೆಯಷ್ಟು ಜಾಗ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗೆಸೇರಿದೆ. ಉಳಿದಂತೆ ಹಲವಾರು ಜನ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಅವರಲ್ಲಿ 38 ಕುಟುಂಬಗಳಿಗೆ ಮಾತ್ರ ತಾಲ್ಲೂಕು ಆಡಳಿತವು ಹಕ್ಕುಪತ್ರ ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿದತಹಶೀಲ್ದಾರ್ ರಾಜಶೇಖರ್,‘ಪ್ರಕರಣದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು’ ಎಂದರು.