ಕೆ.ಆರ್.ಪುರ: ‘ಪಕ್ಷಾಂತರ ಮಾಡಿದವರನ್ನು ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ ಅಲ್ಲಿನ ಮತದಾರರು ಸೋಲಿಸಿದ್ದಾರೆ. ಇಲ್ಲಿಯೂ ಪಕ್ಷಾಂತರ ಮಾಡಿದ 15 ಮಂದಿ ಸೋಲುವುದು ಖಚಿತ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದರು.
ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ನಾಮಪತ್ರ ಸಲ್ಲಿಕೆ ವೇಳೆ ಕೆ.ಆರ್.ಪುರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
‘2013 ರಲ್ಲಿ ಎ.ಕೃಷ್ಣಪ್ಪ ಬದಲು ಬೈರತಿ ಬಸವರಾಜ್ಗೆ ಟಿಕೆಟ್ ಕೊಡಿಸದೇ ಹೋಗಿದ್ದರೆ ಅವರು ಎಂದಿಗೂ ಶಾಸಕರಾಗುತ್ತಿರಲಿಲ್ಲ. ಕಾಂಗ್ರೆಸ್ನಿಂದ ಟಿಕೆಟ್ ಪಡೆದು ಗೆದ್ದು ಇದೀಗ ಅಧಿಕಾರದಾಹಕ್ಕಾಗಿ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಎಷ್ಟು ಸರಿ. ಅವರಿಗೆ ಮಾನ ಮರ್ಯಾದೆ ಇಲ್ಲ’ ಎಂದು ವಾಗ್ದಾಳಿ ನಡೆಸಿದರು.
‘ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಹಿಂಬಾಗಿಲಿನ ಮೂಲಕ ಅಧಿಕಾರ ಹಿಡಿದ ಯಡಿಯೂರಪ್ಪ ಅವರು ಪಕ್ಷಾಂತರ ಕಾಯ್ದೆ ಉದ್ದೇಶವನ್ನೇ ಉಲ್ಲಂಘಿಸಿದ್ದಾರೆ. ಒಂದು ಪಕ್ಷದಿಂದ ಗೆದ್ದು ಇನ್ನೊಂದು ಪಕ್ಷಕ್ಕೆ ಹಾರುವ ಶಾಸಕರು ನಮಗೆ ಬೇಕಾ’ ಎಂದು ಪ್ರಶ್ನಿಸಿದರು.
ನಾರಾಯಣಸ್ವಾಮಿ ಮಾತನಾಡಿ, ‘ಇದು ಸ್ವಾಭಿಮಾನದ ಪ್ರಶ್ನೆ. ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಜನ ಪಾಠ ಕಲಿಸುತ್ತಾರೆ’ ಎಂದರು.
ನಾಮಪತ್ರ ಸಲ್ಲಿಸಿದ ಬಳಿಕ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ಮಾತನಾಡಿ, ‘ಯಾವ ಪಕ್ಷದಲ್ಲಿ ಇರುತ್ತೇನೆಯೋ ಆ ಪಕ್ಷಕ್ಕೆ ನಿಷ್ಠೆಯಿಂದ ಇರುತ್ತೇನೆ. ನನಗೆ ಕ್ಷೇತ್ರದ ಜನರು ಆಶೀರ್ವಾದ ಮಾಡುತ್ತಾರೆ’ ಎಂದರು.