‘ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದ ಅವರು ಔಷಧಿ ವೆಚ್ಚಕ್ಕೆ ಹಣವಿಲ್ಲದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮೃತರ ಸಹೋದರಸೋಲದೇವನಹಳ್ಳಿ ಠಾಣೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಕಬ್ಬೆಪಾಳ್ಯದ ವೀರಪ್ಪ ಅವರ ಮಗಳಾದ ಲಕ್ಷ್ಮಮ್ಮ ಅವರನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ಚನ್ನದೇವಿ ಅಗ್ರಹಾರ ಗ್ರಾಮದ ರಮೇಶ್ ಎಂಬುವವರಿಗೆ ವಿವಾಹ ಮಾಡಿ ಕೊಡಲಾಗಿತ್ತು. ದಂಪತಿ ಕೂಲಿ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು.
‘ವರ್ಷದ ಹಿಂದೆ ಲಕ್ಷ್ಮಮ್ಮ ಅವರಿಗೆ ರಕ್ತದ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು. ಇದರಿಂದ ಗಂಡ ರಮೇಶ್ ದೂರವಾಗಿದ್ದ. ಲಕ್ಷ್ಮಮ್ಮ ಕೂಲಿ ಮಾಡಿಕೊಂಡು ಕಾಯಿಲೆಯ ನಿಯಂತ್ರಣದ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು’ ಎಂದು ಸಂಬಂಧಿಕರು ತಿಳಿಸಿದರು.
‘ಹದಿನೈದು ದಿನಗಳಿಂದ ಕಾಯಿಲೆ ಉಲ್ಬಣಗೊಂಡ ಕಾರಣ ತವರುಮನೆ ಕಬ್ಬೆಪಾಳ್ಯ ಗ್ರಾಮಕ್ಕೆ ಬಂದು ತಂದೆ ಜೊತೆ ಇದ್ದರು. ಗುರುವಾರ ಬೆಳಿಗ್ಗೆ ತಂದೆಗೆ ನಮಸ್ಕಾರ ಮಾಡಿ ‘ಹೋಗಿ ಬರುತ್ತೇನೆ’ ಎಂದು ಹೇಳಿದ್ದಾರೆ. ಅವರು ಊರಿಗೆ ಹೋಗಬಹುದು ಎಂದುಕೊಂಡಿದ್ದರು’ ಎಂದು ಮೃತ ಸಹೋದರ ಹೇಳಿಕೆ ನೀಡಿದ್ದಾರೆ.
ಮಾನವೀಯತೆ ಮೆರೆದ ಪೊಲೀಸರು: ಲಕ್ಷ್ಮಮ್ಮ ಅವರ ಶವ ಸಂಸ್ಕಾರಕ್ಕೆ ದುಡ್ಡಿಲ್ಲದೆ ಇಡೀ ಕುಟುಂಬ ಸಪ್ತಗಿರಿ ಆಸ್ಪತ್ರೆಯಲ್ಲಿ ಕಣ್ಣೀರು ಇಡುತ್ತ ಕುಳಿತಿತ್ತು. ಸೋಲದೇವನಹಳ್ಳಿ ಪೊಲೀಸರು ಹಣವನ್ನು ಸಂಸ್ಕಾರಕ್ಕೆ ನೀಡಿ ಮಾನವೀಯತೆ ಮೆರೆದರು.