ಮುಂಬೈ: ಮುಂಬೈ, ಮುಂಬೈ ಉಪನಗರ ಹಾಗೂ ಉತ್ತರ ಕೊಂಕಣ ಪ್ರದೇಶಗಳಲ್ಲಿ ಸೋಮವಾರ ರಾತ್ರಿ ಭಾರಿ ಮಳೆಯಾಗಿದೆ. ಹಲವೆಡೆ ನೆರೆ ಉಂಟಾಗಿದ್ದು ರಸ್ತೆ ಮತ್ತು ರೈಲು ಸಂಚಾರಕ್ಕೆ ಅಡಚಣೆಯಾಗಿದೆ.
ಮುಂಬೈಯ ಕಿಂಗ್ಸ್ ಸರ್ಕಲ್, ಹಿಂದ್ಮಾತಾ, ಪೋಸ್ಟಲ್ ಕಾಲೋನಿ, ಅಂಧೇರಿ ಸಬ್ವೇ ಪ್ರದೇಶಗಳು ಬಹುತೇಕ ಜಲಾವೃತಗೊಂಡಿವೆ. ಪರಿಹಾರ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಈ ಮಧ್ಯೆ, ಮುಂಬೈ ನಗರದಲ್ಲಿ ಭಾರಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ವರದಿ ತಿಳಿಸಿದೆ.
'ನಗರದಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ರೆಡ್ ಅಲರ್ಟ್ ಘೋಷಿಸಲಾಗಿದೆ' ಎಂದು ಹವಾಮಾನ ಇಲಾಖೆಯ ಉಪಪ್ರಧಾನ ನಿರ್ದೇಶಕ ಕೆ.ಎಸ್.ಹೊಸಾಲಿಕರ್ ತಿಳಿಸಿದ್ದಾರೆ.
ಥಾಣೆ, ಪಾಲ್ಘರ್, ರಾಯಗಡ ಜಿಲ್ಲೆಗಳಲ್ಲಿಯೂ ಭಾರಿ ಮಳೆಯಾಗಿದೆ. ಜನರು ಮನೆಯಲ್ಲಿಯೇ ಇರುವಂತೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಸೂಚಿಸಿದೆ.
'ಹವಾಮಾನ ಇಲಾಖೆ ವರದಿ ಪ್ರಕಾರ, ಮುಂಬೈ ಮತ್ತು ಉಪನಗರಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ತೀರಾ ಅನಿವಾರ್ಯವಲ್ಲದ ಹೊರತು ನಗರವಾಸಿಗಳು ಮನೆಯಿಂದ ಹೊರಬರಬಾರದೆಂದು ಮನವಿ. ಜಲಾವೃತ ಪ್ರದೇಶಗಳಿಂದ ದೂರವಿರಿ' ಎಂದು ಬಿಎಂಸಿ ಪ್ರಕಟಣೆ ತಿಳಿಸಿದೆ.