ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಡಿವೈಎಸ್ಪಿ ಆಗಿದ್ದ,ಸದ್ಯ ಅಮಾನತುಗೊಂಡಿರುವ ದೇವೇಂದರ್ ಸಿಂಗ್ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿನ ತನ್ನ ಪರಿಚಿತರೊಂದಿಗೆ ಕೆಲ ‘ಸೂಕ್ಷ್ಮ’ ಅಂಶಗಳು ಸೇರಿದಂತೆ ವಿವಿಧ ಮಾಹಿತಿಗಳನ್ನು ಹಂಚಿಕೊಂಡಿದ್ದರು ಎಂದು ತನಿಖಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಸಿಂಗ್ ಅವರ ಸಾಮಾಜಿಕ ಜಾಲತಾಣಗಳ ಖಾತೆಗಳ ಪಾಸ್ವರ್ಡ್ ಪತ್ತೆ ಹಚ್ಚಿದ್ದು, ಅವರಿಗಿದ್ದ ಪಾಕ್ ರಾಯಭಾರ ಕಚೇರಿ ಸಿಬ್ಬಂದಿ ಜೊತೆಗಿನ ಸಂಪರ್ಕ ಗೊತ್ತಾಗಿದೆ.
ಸಿಂಗ್ ಸದ್ಯ ಜಮ್ಮುವಿನ ಕಾರಾಗೃಹದಲ್ಲಿದ್ದು, ಅವರು ಸೇರಿ ಆರುಜನರ ವಿರುದ್ಧ ಜು.6ರಂದುಎನ್ಐಎ 3,064 ಪುಟಗಳ ಆರೋಪಪಟ್ಟಿ ಸಲ್ಲಿಸಿದೆ. ನವದೆಹಲಿಯ ಪಾಕ್ ರಾಯಭಾರ ಕಚೇರಿಯ ಕೆಲ ಸಿಬ್ಬಂದಿ ಜೊತೆಗೆ ನಿಕಟ ಸಂಪರ್ಕದಲ್ಲಿದ್ದು, ಸೂಕ್ಷ್ಮವಾದ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ.