ವಿಶ್ವಸಂಸ್ಥೆ: ‘ಹವಾಮಾನ ವಿಷಯಗಳಿಗೆ ಸಂಬಂಧಿಸಿದಂತೆ ಭಾರತದ ಸಹಭಾಗಿತ್ವ ಪಡೆದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ’ ಎಂದು ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಅವರ 2019ರ ಹವಾಮಾನ ಶೃಂಗಸಭೆಯ ರಾಯಭಾರಿ ಅಭಿಪ್ರಾಯಪಟ್ಟಿದ್ದಾರೆ.
‘ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ನಲ್ಲಿ ಇತ್ತೀಚೆಗೆ ಮಹಾ ಪ್ರಧಾನ ಕಾರ್ಯದರ್ಶಿ ಅವರನ್ನು ಭೇಟಿಯಾಗಿ ಹವಾಮಾನ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು. ಮುಖ್ಯವಾಗಿ ಅಪಾರ ಪ್ರಮಾಣದಲ್ಲಿ ಸೌರಶಕ್ತಿಯ ಬಳಕೆಗೆ ಆದ್ಯತೆ ನೀಡುವುದಾಗಿ ಮೋದಿ ತಿಳಿಸಿದ್ದಾರೆ’ ಎಂದು ರಾಯಭಾರಿ ಲೂಯಿಸ್ ಅಲ್ಫೋನ್ಸೊ ಡೆ ಅಲ್ಬಾ ತಿಳಿಸಿದ್ದಾರೆ.
‘ಹವಾಮಾನ ಬದಲಾವಣೆ ತಡೆಯಲು ಭಾರತ ಮುಂಚೂಣಿ ಸ್ಥಾನದಲ್ಲಿದೆ. ಈ ವಿಷಯದಲ್ಲಿ ಕೈಗೊಂಡಿರುವ ಕ್ರಮಗಳನ್ನು ಮತ್ತಷ್ಟು ಬಲಗೊಳಿಸಬೇಕಾಗಿದೆ’ ಎಂದು ಮೋದಿ ತಿಳಿಸಿದ್ದಾರೆ.
’ಭಾರತದ ಕಂಪನಿಗಳು ಸಹ ಹವಾಮಾನ ಬದಲಾವಣೆ ತಡೆಯುವಲ್ಲಿ ಹಲವು ಕ್ರಮಗಳನ್ನು ಕೈಗೊಂಡಿರುವುದು ಶ್ಲಾಘನೀಯ ವಾಗಿದೆ’ ಎಂದು ತಿಳಿಸಿದ್ದಾರೆ.
‘ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದಾಗ ಟಾಟಾ, ಮಹಿಂದ್ರ ಸೇರಿದಂತೆ ಹಲವು ಕಂಪನಿಗಳ ಮುಖ್ಯಸ್ಥರ ಜತೆ ಸಮಾಲೋಚನೆ ನಡೆಸಲಾಯಿತು. ಎಲ್ಲ ಉದ್ಯಮಿಗಳು ಹವಾಮಾನ ಬದಲಾವಣೆ ತಡೆಗೆ ಅತ್ಯುತ್ತಮ ಕ್ರಮಗಳನ್ನು ಕೈಗೊಂಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚೀನಾದ ಧೋರಣೆಗಳ ಬಗ್ಗೆ ಪ್ರಸ್ತಾಪಿಸಿದ ಅಲ್ಬಾ, ’ಕಲ್ಲಿದ್ದಲು ಘಟಕಗಳಿಗೆ ಹಣಕಾಸಿನ ನೆರವು ನೀಡದಂತೆ ಚೀನಾಗೆ ತಿಳಿಸಿದ್ದಾರೆ. ಆದರೆ, ಇತರ ಸಾಧ್ಯತೆಗಳ ಬಗ್ಗೆ ಪರಿಶೀಲಿಸುವಂತೆ ಸೂಚಿಸಲಾಗಿದೆ’ ಎಂದು ತಿಳಿಸಿದ್ದಾರೆ.
‘ಸೆಪ್ಟೆಂಬರ್ 23ರಂದು ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಅವರು ಹವಾಮಾನ ಕುರಿತ ಶೃಂಗಸಭೆಯನ್ನು ಆಯೋಜಿಸಿದ್ದಾರೆ. ವಿಶ್ವದ ಸುಮಾರು 100 ನಾಯಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ತಿಳಿಸಿದ್ದಾರೆ.
‘ಇದೇ ಸಂದರ್ಭದಲ್ಲಿ ಯುವ ಶೃಂಗಸಭೆಯನ್ನು ಸಹ ಆಯೋಜಿಸಲಾಗಿದ್ದು, 600 ಯುವಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ತಿರುವನಂತಪುರದ ಪಿ.ಆರ್. ವಿಷ್ಣು ಅವರು ‘ಗ್ರೀನ್ ಟಿಕೆಟ್’ ಪಡೆದಿದ್ದು, ಈ ಯುವ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.