ಕಠ್ಮಂಡು:ನೇಪಾಳದ ರೆಸಾರ್ಟೊಂದರಲ್ಲಿ ನಾಲ್ವರು ಮಕ್ಕಳು ಸೇರಿದಂತೆ 8 ಮಂದಿ ಕೇರಳದ ಪ್ರವಾಸಿಗರು ಮಂಗಳವಾರ ಮೃತಪಟ್ಟಿದ್ದಾರೆ. ಪ್ರವಾಸಿಗರು ತಂಗಿದ್ದ ಕೊಠಡಿಯಲ್ಲಿ ಅನಿಲ ಸೋರಿಕೆ ಉಂಟಾಗಿದ್ದೇ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ.
ಮೃತರು ಪೋಖ್ರಾ ಪರ್ವತಕ್ಕೆ ಪ್ರವಾಸ ತೆರಳಿದ್ದಕೇರಳದ 15 ಮಂದಿಯ ತಂಡದಲ್ಲಿದ್ದರು. ವಾಪಸಾಗುತ್ತಿದ್ದ ವೇಳೆ ಅವರು ಸೋಮವಾರ ರಾತ್ರಿ ಮಕವಾನ್ಪುರ ಜಿಲ್ಲೆಯ ದಮನ್ನಲ್ಲಿರುವ ‘ಎವರೆಸ್ಟ್ ಪನೋರಮಾ ರೆಸಾರ್ಟ್’ನಲ್ಲಿ ತಂಗಿದ್ದರು ಎಂದು ಹಿಮಾಲಯನ್ ಟೈಮ್ಸ್ ವರದಿ ಮಾಡಿದೆ.
ಅತಿಥಿಗಳು ಕೊಠಡಿ ಬೆಚ್ಚಗಿರಲೆಂದು ಗ್ಯಾಸ್ ಹೀಟರ್ ಆನ್ ಮಾಡಿದ್ದರು ಎಂದುರೆಸಾರ್ಟ್ ಮ್ಯಾನೇಜರ್ ತಿಳಿಸಿದ್ದಾರೆ.
‘ಒಟ್ಟು ನಾಲ್ಕು ಕೊಠಡಿಗಳನ್ನು ಅವರು ಕಾಯ್ದಿರಿಸಿದ್ದರು. ಎಂಟು ಮಂದಿ ಒಂದು ಕೊಠಡಿಯಲ್ಲಿ ತಂಗಿದ್ದು, ಉಳಿದವರು ಮತ್ತೊಂದು ಕೊಠಡಿಯಲ್ಲಿದ್ದರು. ಒಳಗಿನಿಂದ ಕೊಠಡಿಯ ಎಲ್ಲ ಕಿಟಿಕಿ ಮತ್ತು ಬಾಗಿಲುಗಳ ಚಿಲಕವನ್ನು ಹಾಕಲಾಗಿತ್ತು’ ಎಂದೂ ಮ್ಯಾನೇಜರ್ ಹೇಳಿದ್ದಾರೆ.