ಇಸ್ಲಾಮಾಬಾದ್: ದಶಕಗಳಿಂದ ಬೀಗ ಹಾಕಿ ಸಂರಕ್ಷಿಸಿಡಲಾಗಿದ್ದ ಭಗವಾನ್ ಬುದ್ಧನ ಶಿರದ ಅಪರೂಪದ ಪ್ರತಿಮೆಯನ್ನು ಇಸ್ಲಾಮಾಬಾದ್ ವಸ್ತುಸಂಗ್ರಹಾಲಯವು ಪ್ರದರ್ಶನಕ್ಕೆ ಇಟ್ಟಿದೆ.
ಗಾರೆಶಿಲ್ಪದಲ್ಲಿ ಮಾಡಲಾಗಿರುವ ಬುದ್ದನ ಶಿರದ ಪ್ರತಿಮೆಯನ್ನು 1997ರಲ್ಲಿ ಮೊದಲ ಬಾರಿಗೆ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿತ್ತು.
ಪ್ರತಿಮೆಯು ಕ್ರಿ.ಶ. 3ರಿಂದ 4ನೇ ಶತಮಾನದ್ದಾಗಿದೆ. 60ರ ದಶಕದಲ್ಲಿ ಸ್ವಾತ್ ಕಣಿವೆಯಲ್ಲಿ ನಡೆದ ಉತ್ಖನನದಲ್ಲಿ ಇಟಾಲಿಯನ್ ಪುರಾತತ್ವ ಮಿಷನ್ ಇದನ್ನು ಪತ್ತೆ ಹಚ್ಚಿತ್ತು ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.
‘ಸ್ವಾತ್ ಕಣಿವೆಯು ಪ್ರಧಾನವಾಗಿ ಕಲ್ಲಿನ ಶಿಲ್ಪಗಳ ನೆಲೆಯಾಗಿದೆ. ಅದರಲ್ಲಿ ಗಾರೆಶಿಲ್ಪದಿಂದ ಮಾಡಲಾಗಿರುವ ಭಗವಾನ್ ಬುದ್ಧನ ಪ್ರತಿಮೆಗಳು ಕಂಡು ಬರುವುದು ಅಪರೂಪ. ವಸ್ತುಸಂಗ್ರಹಾಲಯದಲ್ಲಿ ಇಡಲಾಗಿರುವ ಬುದ್ಧನ ಶಿರದ ಪ್ರತಿಮೆಯು ಅಪರೂಪದ ಗಾರೆಶಿಲ್ಪ ಪ್ರತಿಮೆಯಾಗಿದೆ. ಈ ರೀತಿಯ ಗಾರೆಶಿಲ್ಪ ಪ್ರತಿಮೆಗಳು ತಕ್ಷಶಿಲಾ ಮತ್ತು ಅಘ್ಗಾನಿಸ್ತಾನದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ’ ಎಂದು ಇಸ್ಲಾಮಾಬಾದ್ ವಸ್ತುಸಂಗ್ರಹಾಲಯದ ನಿರ್ದೇಶಕ ಡಾ.ಅಬ್ದುಲ್ ಗಫೂರ್ ಲೋನ್ ವಿವರಿಸಿದ್ದಾರೆ.
‘ಸಾಮಾನ್ಯವಾಗಿ ಬುದ್ಧನ ಪ್ರತಿಮೆಯಲ್ಲಿ ತಲೆಕೂದಲನ್ನು ಹಿಂದಕ್ಕೆ ಕಟ್ಟಲಾಗಿದ್ದು, ನೇರವಾದ ಕಣ್ಣುಗಳಿರುತ್ತವೆ. ಆದರೆ, ಈ ಗಾರೆಶಿಲ್ಪದಲ್ಲಿ ತಲೆಕೂದಲನ್ನು ಹಿಂದಕ್ಕೆ ತುರುಬಿನ ಮಾದರಿಯಲ್ಲಿ ಕೆತ್ತಲಾಗಿದ್ದು, ಉದ್ದನೆಯ ಕಣ್ಣುಗಳಿದ್ದು, ಶಿಲ್ಪದಲ್ಲಿ ಸ್ತ್ರೀ ಲಕ್ಷಣಗಳಿವೆ’ ಎಂದು ಅವರು ಮಾಹಿತಿ ನೀಡಿದರು.