ದುಬೈ : ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಂ ಹಾಗೂ ಮುಸ್ಲಿಮರ ವಿರುದ್ಧ ದ್ವೇಷ ಪೂರಿತ ಪೋಸ್ಟ್ಗಳನ್ನು ಹಂಚಿಕೊಂಡದ್ದಕ್ಕಾಗಿ, ದುಬೈ ಅಲ್ಲದೆ ಬೇರೆ ಬೇರೆ ದೇಶಗಳಲ್ಲಿರುವ ಭಾರತೀಯರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ.
ಇದೇ ರೀತಿಯ ಪೋಸ್ಟ್ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡದ್ದಕ್ಕಾಗಿ ದುಬೈನ ಗಣಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಿಹಾರದ ಬ್ರಾಜ್ಕಿಶೋರ್ ಗುಪ್ತಾ ಎಂಬುವವರನ್ನು ಮುನ್ನ ನೋಟಿಸ್ ನೀಡದೆ ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಸೋಮವಾರ ದಿ ಗಲ್ಫ್ ನ್ಯೂಸ್ ವರದಿ ಮಾಡಿದೆ.
ಭಾರತೀಯ ಮುಸ್ಲಿಮರು ‘ಕೊರೊನಾ ವೈರಸ್ ಹರಡುವವರು’. ಇತ್ತೀಚೆಗೆ ನಡೆದ ದೆಹಲಿ ಗಲಭೆಯು ‘ದೈವೀಕ ನ್ಯಾಯ’ವಾಗಿತ್ತು ಎಂದು ಗುಪ್ತಾ ಅವರು ತಮ್ಮ ಫೇಸ್ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದರು.
‘ಈ ರೀತಿಯ ಕೃತ್ಯಗಳನ್ನು ನಮ್ಮ ಕಂಪೆನಿ ಸಹಿಸುವುದಿಲ್ಲ ಮತ್ತು ಈ ರೀತಿಯ ವರ್ತನೆ ಕಂಡುಬಂದಲ್ಲಿ ತಕ್ಷಣದಲ್ಲಿ ಕೆಲಸದಿಂದ ವಜಾ ಮಾಡಲಾಗುವುದು ಎಂದು ಈ ಹಿಂದೆಯೇ ಎಲ್ಲ ಧರ್ಮದ ನಮ್ಮ ಕೆಲಸಗಾರರಿಗೆ ಹೇಳಿದ್ದೆವು’ ಎಂದು ಸ್ಟೀವನ್ ರಾಕ್ ಕಂಪೆನಿಯ ಮ್ಯಾನೇಜರ್ ಜೀನ್ ಫ್ರಾನ್ಕೋಸಿಸ್ ಮಿಲಿಯನ್ ಹೇಳಿರುವುದುದಾಗಿ ವರದಿಯಾಗಿದೆ.
ಇಸ್ಲಾಂ ಅಥವಾ ಮುಸ್ಲಿಮರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡದಂತೆ ಏಪ್ರಿಲ್ 20ರಂದು ದುಬೈನಲ್ಲಿರುವ ಭಾರತದ ರಾಯಭಾರಿ ಪವನ್ ಕಪೂರ್ ಅವರು ಭಾರತೀಯರಿಗೆ ಎಚ್ಚರಿಕೆಯನ್ನೂ ನೀಡಿದ್ದರು.
ಇಸ್ಲಮೋಫೋಬಿಯಾದಿಂದ ಇದೇ ತಿಂಗಳಲ್ಲಿ ದುಬೈನಲ್ಲಿರುವ ಮೂವರು ಭಾರತೀಯ ತಮ್ಮ ಕೆಲಸ ಕಳೆದುಕೊಂಡಿದ್ದಾರೆ.