ಕುಶಾಲನಗರ: ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಕೊಡಗಿನ ಹಾರಂಗಿ ಜಲಾಶಯ ಭರ್ತಿಯಾಗಿದ್ದು, ಶ್ರಾವಣ ಮಾಸದ ಶುಭ ಶುಕ್ರವಾರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಜಲಾಶಯಕ್ಕೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ಜಲಾಶಯದ ಆವರಣದಲ್ಲಿರುವ ಕಾವೇರಿ ಮಾತೆಯ ಪ್ರತಿಮೆಗೆ ಶಾಸಕರು ಪಕ್ಷದ ಕಾರ್ಯಕರ್ತರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಮೊದಲಿಗೆ ಪೂಜೆ ಸಲ್ಲಿಸಿದರು.
ನಂತರ ಪಕ್ಷದ ಕಾರ್ಯಕರ್ತರು, ಬೆಂಬಲಿಗರೊಂದಿಗೆ ವಾದ್ಯಗೋಷ್ಠಿಗಳ ಜೊತೆ ಆಗಮಿಸಿ ಅಣೆಕಟ್ಟೆ ಮೇಲೆ ವ್ಯವಸ್ಥೆ ಮಾಡಿದ್ದ ಮಂಟಪದಲ್ಲಿ ನಿಂತು ಮೈದುಂಬಿರುವ ಹಾರಂಗಿ ಜಲಾಶಯಕ್ಕೆ ಪೂಜೆ ಸಲ್ಲಿಸಿ ಬೆಳಿಗ್ಗೆ 9.30ಕ್ಕೆ ಬಾಗಿನ ಸಮರ್ಪಿಸಿದರು.
ಬಳಿಕ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ಕಳೆದ ಎರಡು ವರ್ಷಗಳಿಂದ ಸಂಭವಿಸುತ್ತಿರುವ ಪ್ರವಾಹವನ್ನು ತಗ್ಗಿಸುವ ಉದ್ದೇಶದಿಂದ ಹಾರಂಗಿ ಹಾಗೂ ಕಾವೇರಿ ನದಿ ಪಾತ್ರದಲ್ಲಿ ತುಂಬಿರುವ ಹೂಳೆತ್ತಲು ಸುಮಾರು ₹135 ಕೋಟಿ ಪ್ರಾಸ್ತಾವ ಸಲ್ಲಿಸಲಾಗಿದ್ದು, ಹಣಕಾಸು ಇಲಾಖೆಯ ಮಂಜೂರಾತಿ ಬಾಕಿ ಇದೆ. ಅನುದಾನ ಬಿಡುಗಡೆ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಎರಡು ವರ್ಷಗಳಿಂದ ಕುಶಾಲನಗರ ಪಟ್ಟಣ ಪ್ರವಾಹಕ್ಕೆ ಸಿಲುಕಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಈ ವರ್ಷ ₹70 ಲಕ್ಷ ಅನುದಾನದಲ್ಲಿ ಪಟ್ಟಣ ವ್ಯಾಪ್ತಿಯ ಕಾವೇರಿ ನದಿಯಲ್ಲಿ ಹೂಳೆತ್ತುವ ಕಾರ್ಯ ಕೈಗೊಳ್ಳಲಾಯಿತು. ಇನ್ನೂ ಸ್ವಲ್ಪ ಕಾಮಗಾರಿ ಬಾಕಿ ಇದೆ. ಈ ಬಾರಿ ಪ್ರವಾಹ ಉಂಟಾಗುವುದಿಲ್ಲ ಎಂಬ ನಂಬಿಕೆ ಇದೆ. ಬೆಂಗಳೂರಿನಲ್ಲಿ ನೀರಾವರಿ ಹಾಗೂ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಲಹ ಸಮಿತಿ ಸಭೆ ನಡೆದಿದ್ದು, ಜುಲೈ 31 ರಿಂದಲೇ ರೈತರ ಕಾಲುವೆಗೆ ಜಲಾಶಯದಿಂದ ನೀರು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಅದರಂತೆ ಬಲದಂಡೆ ನಾಲೆಗೆ 1500 ಹಾಗೂ ಎಡದಂಡೆ ನಾಲೆಗೆ 400 ಕ್ಯುಸೆಕ್ ನೀರು ಬಿಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಜಿ.ಪಂ.ಸದಸ್ಯೆ ಕೆ.ಆರ್.ಮಂಜುಳಾ, ಎಚ್.ಆರ್.ಶ್ರೀನಿವಾಸ್, ತಾ.ಪಂ.ಸದಸ್ಯ ಡಿ.ಎಸ್.ಗಣೇಶ್, ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯ ಡಿ.ಕೆ.ತಿಮ್ಮಪ್ಪ, ಬಿ.ಅಮೃತ್ ರಾಜ್, ಕುಡಾ ಅಧ್ಯಕ್ಷ ಎಂ.ಎಂ.ಚರಣ್, ಸದಸ್ಯರಾದ ಪುಂಡಾರೀಕಾಕ್ಷ, ವೈಖಾಖ್.ಗ್ರಾ.ಪಂ.ಸದಸ್ಯರಾದ ಭಾಸ್ಕರ್ ನಾಯಕ್, ರುದ್ರಾಂಬಿಕೆ, ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ಮುಖಂಡರಾದ ಎಂ.ಎನ್.ಕುಮಾರಪ್ಪ, ಕೆ.ಕೆ.ಬೋಗಪ್ಪ, ಮನು ರೈ, ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ರಾಜೇಗೌಡ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಹೇಂದ್ರ, ಸಹಾಯಕ ಎಂಜಿನಿಯರ್ ನಾಗರಾಜು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.