ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಇದರ ಬೆನ್ನಲ್ಲೇ ನಗರದಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಾಗಲೂರು ಠಾಣೆ ವ್ಯಾಪ್ತಿಯ ವಿನಾಯಕನಗರ ನಿವಾಸಿ ರಾಹುಲ್ ರೆಡ್ಡಿ (21) ಹಾಗೂ ಬಾಬಾನಗರ ನಿವಾಸಿ ಪ್ರವೀಣ್ (19) ಎಂಬುವರೇ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳು. ಈ ಕುರಿತು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
‘ವಿದ್ಯಾರ್ಥಿ ರಾಹುಲ್ ರೆಡ್ಡಿ, ಪೋಷಕರ ಜೊತೆ ವಾಸವಿದ್ದರು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ನೊಂದಿದ್ದರು ಎನ್ನಲಾಗಿದೆ. ಬೆಳಿಗ್ಗೆ 11.30ರ ಸುಮಾರಿಗೆ ಮನೆಯ ಕೊಠಡಿಯಲ್ಲೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಬಾಗಲೂರು ಪೊಲೀಸರು ಹೇಳಿದರು.
ಅನುತ್ತೀರ್ಣಗೊಂಡಿದ್ದ ಪ್ರವೀಣ್: ‘ಬಾಬಾನಗರ ನಿವಾಸಿ ಪ್ರವೀಣ್, ದ್ವಿತೀಯ ಪಿಯು ಪರೀಕ್ಷೆಯ ಕೆಲ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರು. ಅದರಿಂದ ಅವರು ನೊಂದಿದ್ದರೆಂದು ಗೊತ್ತಾಗಿದೆ. ಅದೇ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನವಿದೆ’ ಎಂದೂ ಪೊಲೀಸರು ತಿಳಿಸಿದರು.
‘ಎರಡೂ ಪ್ರಕರಣದಲ್ಲೂ ಪೋಷಕರ ಹೇಳಿಕೆ ಪಡೆಯಲಾಗಿದೆ. ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಗಂಟಲಿನ ದ್ರವವನ್ನು ಸಂಗ್ರಹಿಸಿರುವ ವೈದ್ಯರು, ಕೊರೊನಾ ವೈರಾಣು ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಅದರ ವರದಿ ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಹೇಳಿದರು.