ನವದೆಹಲಿ: 17 ಪ್ರಾದೇಶಿಕ ರಾಜಕೀಯ ಪಕ್ಷಗಳು ತಾವು ಪಡೆದ ದೇಣಿಗೆಗಳ ಬಗೆಗಿನ 2017–18ನೇ ಸಾಲಿನ ವರದಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿಲ್ಲ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಹೇಳಿದೆ. ಚುನಾವಣಾ ಸುಧಾರಣೆ, ಭ್ರಷ್ಟಾಚಾರ ತಡೆಗಾಗಿ ಎಡಿಆರ್ ಪ್ರಯತ್ನಿಸುತ್ತಿದೆ.
ಒಟ್ಟು 48 ಪಕ್ಷಗಳ ವಿಶ್ಲೇಷಣೆ ನಡೆಸಲಾಗಿತ್ತು. ಅವುಗಳ ಪೈಕಿ 15 ಪಕ್ಷಗಳು ಮಾತ್ರ ದೇಣಿಗೆ ಮಾಹಿತಿಯನ್ನು ನಿಗದಿತ ಮಾದರಿಯಲ್ಲಿ ಆಯೋಗಕ್ಕೆ ಸಲ್ಲಿಸಿವೆ. 16 ಪಕ್ಷಗಳು ಲೆಕ್ಕಪತ್ರವನ್ನು ವಿಳಂಬವಾಗಿ ಸಲ್ಲಿಸಿವೆ ಎಂದು ಎಡಿಆರ್ ವರದಿಯು ಹೇಳಿದೆ.
ಒಟ್ಟು ₹54.81 ಕೋಟಿಯನ್ನು ದೇಣಿಗೆಯಾಗಿ ಪಡೆಯಲಾಗಿದೆ ಎಂದು ಪ್ರಾದೇಶಿಕ ಪಕ್ಷಗಳು ಘೋಷಿಸಿವೆ. ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾದಳ ₹13.04 ಕೋಟಿ ದೇಣಿಗೆ ಪಡೆದಿದೆ. ಆರು ದೇಣಿಗೆಗಳಿಂದ ಈ ಮೊತ್ತವನ್ನು ಪಡೆದುಕೊಳ್ಳಲಾಗಿದೆ. ₹11.19 ಕೋಟಿ ದೇಣಿಗೆ ಪಡೆದಿರುವ ಜೆಡಿಯು ಎರಡನೇ ಸ್ಥಾನದಲ್ಲಿದೆ. ವೈಎಸ್ಆರ್ ಕಾಂಗ್ರೆಸ್ ಪಕ್ಷವು ₹8.35 ಕೋಟಿ ದೇಣಿಗೆ ಪಡೆದು ಮೂರನೇ ಸ್ಥಾನದಲ್ಲಿದೆ.