ಲಖನೌ: ಉತ್ತರಪ್ರದೇಶದಲ್ಲಿ ಗುರುವಾರ ಮತ್ತು ಶುಕ್ರವಾರ ಸುರಿದ ಗುಡುಗುಸಹಿತ ಸುರಿದ ಭಾರಿ ಮಳೆಗೆ ಮಹಿಳೆಯರು, ಮಕ್ಕಳು ಸೇರಿದಂತೆ ಒಟ್ಟು 35 ಮಂದಿ ಸಾವನ್ನಪ್ಪಿದ್ದಾರೆ.
ಲಖನೌದಿಂದ ಸುಮಾರು 90 ಕಿ.ಮೀ. ದೂರದಲ್ಲಿರುವ ಸೀತಾಪುರ ಜಿಲ್ಲೆಯಲ್ಲಿ ಮಳೆಯಿಂದಾಗಿ ಮನೆ ಕುಸಿದು, ಮಲಗಿದ್ದ 8 ಮಂದಿ ಸಾವನ್ನಪ್ಪಿದ್ದ ಘಟನೆ ನಡೆದಿದೆ.
ಬಹರೈಚ್ ಜಲ್ಲೆಯಲ್ಲಿ ಶಾಲೆಯಿಂದ ಮನೆಗೆ ಮರಳುತ್ತಿದ್ದ ಮಗುವಿನ ಮೇಲೆ ವಿದ್ಯುತ್ ಕಂಬ ಬಿದ್ದು ಮಗು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಲಿಕಲ್ಲು ಸಹಿತ ಸುರಿದ ಮಳೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ಬೆಳೆದು ನಿಂತಿದ್ದ ಅಪಾರ ಪ್ರಮಾಣದ ಗೋಧಿ ಬೆಳೆ ನಾಶವಾಗಿದೆ.ಬಾರಾಬಂಕಿ, ಲಖಿಂಪುರ್ ಖೇರಿ, ಸುಲ್ತಾನ್ಪುರ, ಪ್ರತಾಪ್ಘರ್, ಹಾರ್ದೊಯಿ ಸೇರಿದಂತೆ ಹಲವು ಕಡೆ ಸಿಡಿಲಿನಿಂದಾಗಿ ಹಲವರು ಸಾವನ್ನಪ್ಪಿದ್ದಾರೆ.
ಮೃತಪಟ್ಟವರ ಕುಟುಂಬಗಳಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಲಾ ₹ 4ಲಕ್ಷ ಪರಿಹಾರ ಘೋಷಿಸಿದ್ದಾರೆ.
ನವದೆಹಲಿ ವರದಿ (ಪಿಟಿಐ): ನವದೆಹಲಿಯ ಹಲವೆಡೆ ಶನಿವಾರ ಮಧ್ಯಾಹ್ನ ಭಾರಿ ಆಲಿಕಲ್ಲು ಸಹಿತ ಮಳೆಯಾಗಿದೆ. ಪಂಜಾಬ್, ಹರಿಯಾಣ, ಜಾರ್ಖಂಡ್ ಸೇರಿದಂತೆ ಉತ್ತರ ಭಾರತದಲ್ಲಿ ಮಳೆಯಾಗಿದ್ದು ರೈತರಲ್ಲಿ ಸಂತಸ ಮೂಡಿಸಿದೆ.
ದೆಹಲಿಯಲ್ಲಿ ಸುರಿದ ಮಳೆಯಿಂದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದವು. ಜತೆಗೆ, ನಗರದಲ್ಲಿನ ಮಾಲಿನ್ಯವೂ ಕಡಿಮೆ ಯಾಯಿತು. ಕೆಲ ದಿನಗಳಿಂದ ಬಿಸಿಲಿನಿಂದ ತತ್ತರಿಸಿದ್ದ ಜನತೆಗೆ ಮಳೆ ತಂಪೆರೆಯಿತು.