ನವದೆಹಲಿ: ಭಾರತ ಮತ್ತು ಚೀನಾ ಗಡಿ ಪ್ರದೇಶದಲ್ಲಿ ಶಾಂತಿ ಕಾಪಾಡಲು ಬದ್ಧವಿರುವುದಾಗಿ ಭಾರತ ಮತ್ತು ಚೀನಾ ಶನಿವಾರ ಒಪ್ಪಿಕೊಂಡಿವೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ಶನಿವಾರ ಉಭಯ ದೇಶಗಳ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಪರಿಸ್ಪರ ಒಪ್ಪಿಗೆಯಾಗುವ ಪರಿಹಾರವನ್ನು ಕಂಡುಕೊಳ್ಳಲು ಒಪ್ಪಿದರು.
‘ಮಾತುಕತೆ ರಚನಾತ್ಮಕವಾಗಿತ್ತು. ಪರಸ್ಪರರ ಆತಂಕಗಳನ್ನು ಗೌರವಿಸುವುದಾಗಿ ಉಭಯ ದೇಶಗಳು ತಿಳಿಸಿವೆ. ಜತೆಗೆ, ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ಕುರಿತು ಚರ್ಚಿಸಲಾಯಿತು’ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಗಡಿ ವಿಷಯದ ಕುರಿತಾದ ವಿವಿಧ ಆಯಾಮಗಳ ಬಗ್ಗೆ ಚರ್ಚೆ ನಡೆಸಿದ ಇಬ್ಬರು, ಗಡಿಯಲ್ಲಿ ಉಭಯ ದೇಶಗಳು ಶಾಂತಿ ಕಾಪಾಡಲು ಬದ್ಧವಾಗಿರುವ ಭರವಸೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರು ಮಾಮಲ್ಲಪುರಂನಲ್ಲಿ ಅಕ್ಟೋಬರ್ನಲ್ಲಿ ಸಭೆ ನಡೆಸಿದ ನಂತರ ಉಭಯ ದೇಶಗಳ ನಡುವೆ ನಡೆದ ಉನ್ನತ ಮಟ್ಟದ ಮೊದಲ ಮಾತುಕತೆ ಇದಾಗಿದೆ. ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಡೊಭಾಲ್ ಮತ್ತು ವಾಂಗ್ ಅವರು ಭಾರತ ಮತ್ತು ಚೀನಾದ ವಿಶೇಷ ಪ್ರತಿನಿಧಿಗಳಾಗಿದ್ದಾರೆ.