‘ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ಮಂಗಳವಾರ ದೂರವಾಣಿ ಮೂಲಕ ಅಜಿತ್ ಅವರನ್ನು ಸಂಪರ್ಕಿಸಿ, ಬಿಜೆಪಿಯನ್ನು ಬೆಂಬಲಿಸುವ ನಿರ್ಧಾರದಿಂದ ಹಿಂದೆ ಸರಿಯುವಂತೆ ಸಲಹೆ ನೀಡಿದರು. ಇದಾಗಿ ಸ್ವಲ್ಪ ಹೊತ್ತಿನಲ್ಲೇ ಅಜಿತ್ ಅವರು ಸುಪ್ರಿಯಾ ಸುಳೆ ಅವರ ಪತಿ ಸದಾನಂದ ಸುಳೆ ಅವರನ್ನು ಹೋಟೆಲ್ ಒಂದರಲ್ಲಿ ಭೇಟಿಮಾಡಿ ಮಾತುಕತೆ ನಡೆಸಿದರು. ಈ ಭೇಟಿಯ ನಂತರ ಅಜಿತ್, ಮುಖ್ಯಮಂತ್ರಿಯ ಅಧಿಕೃತ ನಿವಾಸ ‘ವರ್ಷಾ’ಗೆ ಹೋದರು. ಅಲ್ಲಿ ಆ ಸಂದರ್ಭದಲ್ಲಿ ಬಿಜೆಪಿಯ ಪ್ರಮುಖ ನಾಯಕರ ಸಭೆ ನಡೆಯುತ್ತಿತ್ತು. ಅಲ್ಲಿಯೇ ಅವರು ರಾಜೀನಾಮೆ ಪತ್ರ ಸಲ್ಲಿಸಿ ಹೊರಬಂದರು’ ಎಂದು ಎನ್ಸಿಪಿ ನಾಯಕರೊಬ್ಬರು ತಿಳಿಸಿದರು.