ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ಪರ ಕೋಲ್ಕತ್ತದಲ್ಲಿ ಅಮಿತ್‌ ಶಾ ಸಭೆ: ಪ್ರತಿಭಟನೆ ಭುಗಿಲೇಳುವ ಸಾಧ್ಯತೆ

Last Updated 1 ಮಾರ್ಚ್ 2020, 4:55 IST
ಅಕ್ಷರ ಗಾತ್ರ

ಕೋಲ್ಕತ್ತ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಭಾನುವಾರ ನಗರಕ್ಕೆ ಆಗಮಿಸಲಿದ್ದು, ಅವರ ವಿರುದ್ಧ ಪ್ರತಿಭಟನೆ ಭುಗಿಲೇಳುವಸಾಧ್ಯತೆ ಹೆಚ್ಚಿದೆ.

ಸಿಎಎ ಪರವಾಗಿ ಹಮ್ಮಿಕೊಂಡಿರುವ ಸಾರ್ವಜನಿಕ ಸಭೆಯಲ್ಲಿ ಅಮಿತ್‌ ಶಾ ಮಾತನಾಡಲಿದ್ದಾರೆ.

ಪಶ್ಚಿಮ ಬಂಗಾಳ ಬಿಜೆಪಿ ಕೇಂದ್ರ ಕಚೇರಿ ಮುಂದೆ ‘ರಾಜಕೀಯ ವಿರೋಧಿ ಪ್ರತಿಭಟನೆ’ಯನ್ನು ಮುಸ್ಲಿಂ ಸಾಮಾಜಿಕ ಕಾರ್ಯಕರ್ತರು ಮತ್ತು ವಿದ್ಯಾರ್ಥಿ ಸಂಘಟನೆ ಹಮ್ಮಿಕೊಂಡಿದೆ.

ಭಾರತದ ಪ್ರಮುಖ ಇಸ್ಲಾಮಿಕ್ ವಿದ್ವಾಂಸರ ಸಂಘಟನೆಗಳಲ್ಲಿ ಒಂದಾದ ಜಮಿಯತ್ ಉಲ್ಮಾ-ಎ-ಹಿಂದ್ ನಗರದಲ್ಲಿ ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿದ್ದು, ಇದರ ನೇತೃತ್ವವನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಚಿವ ಸಿದ್ದಿಕುಲ್ಲಾ ಚೌಧರಿ ವಹಿಸಿಕೊಳ್ಳಲಿದ್ದಾರೆ.

ಎಡ ಪಕ್ಷಗಳು ನಗರದ ಬೀದಿಗಳಲ್ಲಿ ಪ್ರತಿಭಟನೆ ನಡೆಸಲು ಕರೆ ನೀಡಿವೆ. ಪಶ್ಚಿಮ ಬಂಗಾಳ ಸಾಮಾಜಿಕ ಕಾರ್ಯಕರ್ತರ ಗುಂಪು ಪ್ರತ್ಯೇಕ ಪ್ರತಿಭಟನೆ ಆಯೋಜಿಸಿದೆ.

ಈ ಎಲ್ಲ ಪ್ರತಿಭಟನೆ, ಧರಣಿಗಳು ಸಿಎಎ ಪರ ಬಿಜೆಪಿ ಹಮ್ಮಿಕೊಂಡಿರುವ ಸಭೆಯ ಸ್ಥಳದ ಸುತ್ತಮುತ್ತ ನಡೆಯಲಿವೆ.

‘ನರೇಂದ್ರ ಮೋದಿಯವರನ್ನು ಈ ಹಿಂದೆ ಕಪ್ಪು ಧ್ವಜಗಳೊಂದಿಗೆ ಸ್ವಾಗತಿಸಿದ ರೀತಿಯಲ್ಲಿಯೇ ಕೋಲ್ಕತ್ತ ಜನರು ಶಾ ಅವರನ್ನು ಸ್ವಾಗತಿಸಲಿದ್ದಾರೆ. ದೆಹಲಿ ಘರ್ಷಣೆಯಲ್ಲಿ ಶಾ ತಮ್ಮ ಕೈಗಳನ್ನು ರಕ್ತದಲ್ಲಿ ನೆನೆಸಿಕೊಂಡಿದ್ದಾರೆ. ಬಂಗಾಳವು ಅವರನ್ನು ಒಳ್ಳೆಯ ರೀತಿಯಲ್ಲಿ ಸ್ವಾಗತಿಸಲು ಬಯಸುವುದಿಲ್ಲ’ಎಂದು ಸಿಪಿಎಂ ಮುಖಂಡ ಮೊಹಮ್ಮದ್ ಸಲೀಂ ಹೇಳಿದ್ದಾರೆ.

ಪಶ್ಚಿಮ ಬಂಗಾಳ ಬಿಜೆಪಿ ಕೇಂದ್ರ ಕಚೇರಿಗೆ ದಿಗ್ಬಂಧನ ಹೇರಲು ಕರೆ ನೀಡಿರುವ ಸಾಮಾಜಿಕ ಕಾರ್ಯಕರ್ತ ವಾಲಿ ರೆಹಮಾನಿ, ‘ನಾವು ರಾಮ್‌ಲೀಲಾ ಮೈದಾನದಿಂದ ಬಿಜೆಪಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತೇವೆ. ಶಾ ಅವರಿಗೆ ನೀಡಲು ಸಿಹಿ ತಿಂಡಿಗಳು, ಹೂಗಳು ಮತ್ತು ಪತ್ರವನ್ನು ತೆಗೆದುಕೊಂಡು ಹೋಗಲಿದ್ದೇವೆ. ಆ ಮೂಲಕ ದ್ವೇಷದ ಭಾಷಣ ಮಾಡುವುದನ್ನು ನಿಲ್ಲಿಸಬೇಕೆಂದು ಮನವಿ ಮಾಡಲಿದ್ದೇವೆ’ಎಂದು ತಿಳಿಸಿದ್ದಾರೆ.

ಜಮಿಯತ್ ಉಲ್ಮಾ-ಎ-ಹಿಂದ್ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಮತ್ತು ಗ್ರಂಥಾಲಯ ಸಚಿವ ಸಿದ್ದಿಕುಲ್ಲಾ ಚೌಧರಿ ಅವರು ಮೌಲಾಲಿ ಪ್ರದೇಶದಿಂದ ಶಾಂತಿಯುತ ಮೆರವಣಿಗೆಯನ್ನು ಮುನ್ನಡೆಸಲಿದ್ದಾರೆ.

ಈ ಬಗ್ಗೆ ಮಾತನಾಡಿರುವ ಚೌಧರಿ, ‘ದೆಹಲಿಯಲ್ಲಿ ನಡೆದ ಗಲಭೆ ಸಂದರ್ಭ ಶಾ ನಿಷ್ಕ್ರಿಯತೆ ಖಂಡಿಸಿ ಅವರ ರಾಜೀನಾಮೆಗೆ ಒತ್ತಾಯಿಸಲಿದ್ದೇನೆ. ಅಮಿತ್‌ ಶಾ ಅವರಿಂದ ನಮ್ಮ ದೇಶಕ್ಕೆ ಕೆಟ್ಟ ಹೆಸರು ಬಂದಿದೆ‘ ಎಂದು ಹೇಳಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಪೂರ್ವಯೋಜಿತ ಪ್ರತಿಭಟನೆಗಳನ್ನು ಟೀಕಿಸಿದ್ದಾರೆ.

‘ಎಡ ಹಾಗೂ ಕಾಂಗ್ರೆಸ್ ಪಕ್ಷಗಳು ತಮ್ಮ ವಿನಾಶಕಾರಿ ರಾಜಕಾರಣದಿಂದಾಗಿ ಅಳಿವಿನ ಅಂಚಿನಲ್ಲಿವೆ. ಪುನರುಜ್ಜೀವನಕ್ಕಾಗಿ ಅವರು ಅದೇ ರೀತಿಯ ರಾಜಕೀಯವನ್ನು ಆಶ್ರಯಿಸುತ್ತಿದ್ದಾರೆ. ಜನರು ಅವರನ್ನು ತಿರಸ್ಕರಿಸುತ್ತಾರೆ’ ಎಂದು ಘೋಷ್ ತಿಳಿಸಿದ್ದಾರೆ.

ಇದೇ ವೇಳೆ ಪಶ್ಚಿಮ ಬಂಗಾಳ ಪೊಲೀಸರು ಕೋಲ್ಕತದಾದ್ಯಂತ ಭಾರೀ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT