ಮಜುಲಿ ದ್ವೀಪವನ್ನೂ ಒಳಗೊಂಡ ಬ್ರಹ್ಮಪುತ್ರದ ಈ ಮರಳಕಟ್ಟೆಯಲ್ಲಿ ತಾಪಮಾನದ ಏರಿಕೆಯನ್ನು 40 ವರ್ಷಗಳಷ್ಟು ಹಿಂದೆಯೇ ಗುರ್ತಿಸಿದ ಪಯೇಂಗ್ ಅವರು, ಸಸಿಗಳನ್ನು ನೆಡುವ ಕೆಲಸವನ್ನು ಆರಂಭಿಸಿದ್ದರು. ನದಿಯಿಂದ ನೀರು ಹೊತ್ತು ತಂದು ಅವುಗಳಿಗೆ ಉಣಿಸುತ್ತಿದ್ದರು. ವರ್ಷಗಳು ಉರುಳಿದಂತೆ ಮರುಭೂಮಿಯಂತಿದ್ದ ಪ್ರದೇಶ ಹಸಿರಿನಿಂದ ಕಂಗೊಳಿಸಲು ಆರಂಭಿಸಿತು.