ನವದೆಹಲಿ: ಸಂಸದರಾಗಿ ಆಯ್ಕೆಯಾಗಿ ಅಥವಾ ಸಚಿವರಾಗಿ ನೇಮಕಗೊಂಡ ಬಳಿಕವೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ತಳಮಟ್ಟದ ಕಾರ್ಯಕರ್ತರಾಗಿ ಕೆಲಸ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಸಂಸದರಿಗೆ ಶನಿವಾರ ಕರೆ ನೀಡಿದರು.
ಪಕ್ಷದಿಂದ ಆಯ್ಕೆಯಾಗಿರುವ ಸಂಸದರಿಗಾಗಿ ಏರ್ಪಡಿಸಿದ್ದ ಎರಡು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಪಕ್ಷ ಈ ಹಂತಕ್ಕೆ ಬೆಳೆದಿರುವುದು ಸಿದ್ಧಾಂತ ಹಾಗೂ ಚಿಂತನೆಗಳಿಂದಾಗಿಯೇ ಹೊರತು ಯಾವುದೋ ಒಂದು ಕುಟುಂಬದಿಂದಾಗಿ ಅಲ್ಲ’ ಎಂದರು.
‘ಯಾವುದೇ ವಯಸ್ಸಿನ ನಿರ್ಬಂಧವಿಲ್ಲದೇ, ವಿದ್ಯಾರ್ಥಿಗಳ ರೀತಿ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರಧಾನಿ ಕಿವಿಮಾತು ಹೇಳಿದರು’ ಎಂದು ಸಚಿವ ಪ್ರಹ್ಲಾದ್ ಜೋಶಿ ಅವರು ತಿಳಿಸಿದರು.
ಸಂಸದರನ್ನು ಉದ್ದೇಶಿಸಿ ಪಕ್ಷದ ಅಧ್ಯಕ್ಷ ಅಮಿತ್ ಶಾ, ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಕೂಡ ಮಾತನಾಡಿದರು.