ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟಗಳು ತೀವ್ರವಾಗುತ್ತಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶದ ಭದ್ರತೆಗೆ ಸಂಬಂಧಿಸಿದಂತೆ ಗುರುವಾರಸಂಜೆ ಗೃಹ ಇಲಾಖೆಯಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಭದ್ರತೆ ಪರಿಶೀಲನಾ ಸಭೆ ನಡೆಸಲಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಬಾಲ್, ಗೃಹ ಖಾತೆ ರಾಜ್ಯ ಸಚಿವ ಕಿಶನ್ ಕುಮಾರ್ ರೆಡ್ಡಿ, ಗೃಹ ಸಚಿವಾಲಾಯದ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ಈ ಸಭೆಯಲ್ಲಿ ಇರಲಿದ್ದಾರೆ.
ಉನ್ನತ ಮಟ್ಟದ ಅಧಿಕಾರಿಗಳೊಂದಿಗಿನ ಈ ಸಭೆಯಲ್ಲಿ ದೇಶದ ಭದ್ರತೆಯ ಕುರಿತು ಪರಾಮರ್ಶೆ ನಡೆಯಲಿದೆ.
ಉತ್ತರ ಭಾರತದಲ್ಲಿ... ಅದರಲ್ಲೂ, ರಾಷ್ಟ್ರ ರಾಜಧಾನಿ ಕೇಂದ್ರಿತವಾಗಿದ್ದ ಪ್ರತಿಭಟನೆಗಳು ಗುರುವಾರ ಕರ್ನಾಟಕವನ್ನೂ ಆವರಿಸಿವೆ. ಎಲ್ಲ ಜಿಲ್ಲೆಗಳಲ್ಲೂ ಗುರುವಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟಗಳು ನಡೆದಿವೆ.
ಬೆಂಗಳೂರಿನಲ್ಲಿ ಹೋರಾಟ ನಿರತ ಇತಿಹಾಸಜ್ಞ ರಾಮಚಂದ್ರ ಗುಹಾ ಅವರ ಬಂಧನವೂ ನಡೆದಿದ್ದು, ಈ ಬೆಳವಣಿಗೆ ರಾಷ್ಟ್ರದ ಗಮನ ಸೆಳೆಯಿತು.
ಪ್ರತಿಭಟನೆ ವ್ಯಾಪಕವಾಗುತ್ತಿರುವ ಮುನ್ಸೂಚನೆ ಅರಿತಿರುವ ಅಮಿತ್ ಶಾ ಇದೇ ಹಿನ್ನೆಲೆಯಲ್ಲಿ ಗುರುವಾರ ಮಹತ್ವದ ಸಭೆ ನಡೆಸಲು ಉದ್ದೇಶಿಸಿದ್ದಾರೆ.