ನವದೆಹಲಿ:ತಮ್ಮ ಪಕ್ಷದ ನಾಯಕ ಹಾರ್ದಿಕ್ ಪಟೇಲ್ ಅವರಿಗೆ ಬಿಜೆಪಿ ಪದೇಪದೇ ಕಿರುಕುಳ ನೀಡುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾನುವಾರ ಆರೋಪಿಸಿದ್ದಾರೆ. 2015ರ ದೇಶದ್ರೋಹ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಹಾರ್ದಿಕ್ ಅವರನ್ನು ಶನಿವಾರ ಬಂಧಿಸಲಾಗಿತ್ತು.
ಪಟೇಲ್ ಅವರು ಯುವಕರಿಗೆ ಉದ್ಯೋಗ ದೊರಕಿಸಿಕೊಡಲು ಮತ್ತು ರೈತರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ ಎಂದು ಪ್ರಿಯಾಂಕಾ ಹೇಳಿದ್ದಾರೆ.
‘ಹಾರ್ದಿಕ್ ಅವರ ಸಮಾಜದ ಜನರ ಪರವಾಗಿ ದನಿಯೆತ್ತಿದ್ದಾರೆ, ಅವರಿಗೆ ಉದ್ಯೋಗ, ವಿದ್ಯಾರ್ಥಿವೇತನ ದೊರಕಿಸಿಕೊಡುವಂತೆ ಕೇಳಿದ್ದಾರೆ. ರೈತರ ಹಕ್ಕುಗಳಿಗಾಗಿ ಧ್ವನಿಯೆತ್ತಿದ್ದಾರೆ. ಆದರೆ ಅದನ್ನು ಬಿಜೆಪಿ ದೇಶದ್ರೋಹ ಎನ್ನುತ್ತಿದೆ’ ಎಂದು ಅವರು ದೂರಿದ್ದಾರೆ.
ಹಾರ್ದಿಕ್ ಪಟೇಲ್ ಅವರನ್ನು ಅಹಮದಾಬಾದ್ ಜಿಲ್ಲೆಯ ವೀರಂಗಾಂನಲ್ಲಿ ಪೊಲೀಸರು ಶನಿವಾರ ಬಂಧಿಸಿದ್ದರು.ವಿಚಾರಣೆಗೆ ಹಾಜರಾಗದ ಕಾರಣ ಅವರ ಬಂಧನಕ್ಕೆ ಅಹಮದಾಬಾದ್ನ ಸೆಷನ್ಸ್ ಕೋರ್ಟ್ ವಾರಂಟ್ ಜಾರಿ ಮಾಡಿತ್ತು. ಇದಾದ ಕೆಲವೇ ಗಂಟೆಯಲ್ಲಿ ಹಾರ್ದಿಕ್ರನ್ನು ಬಂಧಿಸಲಾಗಿತ್ತು.