ಜೈಪುರ: ‘ಕರ್ನಾಟಕ, ಮಧ್ಯಪ್ರದೇಶ ಹಾಗೂ ಗುಜರಾತ್ನಂತೆ ರಾಜಸ್ಥಾನದಲ್ಲೂ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ರಾಜಸ್ಥಾನ ವಿಧಾನಸಭೆಯ ಮುಖ್ಯ ಸಚೇತಕ ಮಹೇಶ್ ಜೋಶಿ ಬುಧವಾರ ಆರೋಪಿಸಿದ್ದಾರೆ.
ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಿರುವ ಅವರು, ‘ನಮ್ಮ ಪಕ್ಷದ ಶಾಸಕರು ಹಾಗೂ ನಮಗೆ ಬೆಂಬಲ ನೀಡಿರುವ, ಪಕ್ಷೇತರ ಶಾಸಕರಿಗೆ ಆಮಿಷ ಒಡ್ಡಲಾಗುತ್ತಿದೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಬಿಜೆಪಿಯ ಹೆಸರನ್ನು ಉಲ್ಲೇಖಿಸದೆ ಒತ್ತಾಯಿಸಿದ್ದಾರೆ.
ಜೂನ್ 19ರಂದು ರಾಜ್ಯಸಭಾ ಚುನಾವಣೆ ನಡೆಯಲಿದ್ದು, ಆ ಕಾರಣಕ್ಕಾಗಿಯೇ ಹಟಾತ್ತನೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ ಎನ್ನಲಾಗುತ್ತಿದೆ.