ಲಖನೌ: ಉತ್ತರಪ್ರದೇಶದಲ್ಲಿ ಪಕ್ಷಾಂತರಿಗಳಿಗೆ ಕಾಂಗ್ರೆಸ್ ಸುರಕ್ಷಿತ ನೆಲೆಯಾಗಿ ಕಾಣುತ್ತಿದೆ. ಪಕ್ಷವು ಅವರನ್ನು ಸ್ವಾಗತಿಸಿದೆ. ಮಾತ್ರವಲ್ಲ, ಲೋಕಸಭಾ ಚುನಾವಣೆಗಳಿಗೆ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿ ಔದಾರ್ಯ ಪ್ರದರ್ಶಿಸಿದೆ.
ಹಾಲಿ ಸಂಸತ್ ಸದಸ್ಯರನ್ನೂ ಒಳಗೊಂಡಂತೆ ಬೇರೆ ಬೇರೆ ಪಕ್ಷಗಳ ಹತ್ತು ಹಿರಿಯ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಜಿಗಿದಿದ್ದಾರೆ. ಪುನರಾಯ್ಕೆಗೆ ಟಿಕೆಟ್ ಸಿಗದವರು ಅಥವಾ ಆಕಾಂಕ್ಷಿಗಳಾಗಿದ್ದವರು ತಮಗೆ ಟಿಕೆಟ್ ಸಿಗುವುದಿಲ್ಲವೆಂದು ಖಚಿತವಾದ ಮೇಲೆ ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್ ಈ ಎಲ್ಲರನ್ನೂ ವಿವಿಧ ಕ್ಷೇತ್ರಗಳಿಂದ ಕಣಕ್ಕಿಳಿಸುತ್ತಿದೆ.
ಬಿಜೆಪಿ ಸಂಸದರಾದ ಅಶೋಕ ದೊಹರೆ ಮತ್ತು ಸಾವಿತ್ರಿ ಬಾಯಿ ಫುಲೆ ಟಿಕೆಟ್ ದೊರೆತವರಲ್ಲಿ ಪ್ರಮುಖರು. ದೊಹರೆ ಅವರಿಗೆ ಇಟವಾದಿಂದ ಮತ್ತು ಫುಲೆ ಅವರಿಗೆ ಬಹರೇಚ್ನಿಂದ ಸ್ಪರ್ಧಿಸಲು ಅವಕಾಶ ದೊರೆತಿದೆ.
ಸಮಾಜವಾದಿ ಪಕ್ಷದ ಮಾಜಿ ಸಂಸದ ರಾಕೇಶ್ ಸಚ್ಚನ್ ಮತ್ತು ಓಂವತಿ ದೇವಿ ಮತ್ತು ಕೆಲವು ದಿನ ಹಿಂದಷ್ಟೇ ಪಕ್ಷಾಂತರ ಮಾಡಿದ ಬಿಎಸ್ಪಿಯ ಮಾಜಿ ಸಂಸದೆ ಕೈಸರ್ ಜಹಾಣ ಕೂಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ.
ಮುಂದಿನ ಕೆಲವು ದಿನಗಳಲ್ಲಿ ಬೇರೆ ಪಕ್ಷಗಳ ಇನ್ನೂ ಕೆಲವರು ಪಕ್ಷ ಸೇರುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಅವರ ಸಾಮರ್ಥ್ಯ ಆಧರಿಸಿ ಅವರನ್ನು ಕಣಕ್ಕಿಳಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಹಿರಿಯ ಮುಖಂಡರೊಬ್ಬರು ತಿಳಿಸಿದರು.
ತಮ್ಮ ಪಕ್ಷದ ಮಾಜಿ ನಾಯಕರನ್ನು ಕಾಂಗ್ರೆಸ್ ಕಣಕ್ಕಿಳಿಸಿದ್ದರ ಬಗ್ಗೆ ಎಸ್ಪಿ ಮತ್ತು ಬಿಎಸ್ಪಿ ಅಸಮಾಧಾನ ಸೂಚಿಸಿವೆ. ‘ಮಹಾಮೈತ್ರಿ ಕಾರಣ ಸಹಜವಾಗಿ, ನಾವಾಗಲಿ ಮತ್ತು ಬಿಎಸ್ಪಿಯಾಗಲಿ ಎಲ್ಲ 80 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಆಗದು’ ಎಂದು ಎಸ್ಪಿ ನಾಯಕರೊಬ್ಬರು ಇಲ್ಲಿ ತಿಳಿಸಿದರು.