ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಂಗಡಿ ಕಾರುಬಾರು ಆರಂಭ

Last Updated 20 ಫೆಬ್ರುವರಿ 2018, 9:08 IST
ಅಕ್ಷರ ಗಾತ್ರ

ಚಾಮರಾಜನಗರ: ಬೇಸಿಗೆಯ ಝಳ ಹೆಚ್ಚಾಗುತ್ತಿದ್ದಂತೆಯೇ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚುತ್ತಿದೆ. ನಗರದ ಮಾರುಕಟ್ಟೆಯಲ್ಲಿ ಕಲ್ಲಂಗಡಿ  ಕಾರುಬಾರು ಜೋರಾಗಿದೆ. ನಗರದ ಸತ್ತಿರಸ್ತೆ, ಜೋಡಿರಸ್ತೆ, ಗುಂಡ್ಲುಪೇಟೆ ವೃತ್ತ, ಸಂತೇಮರಹಳ್ಳಿ ವೃತ್ತ, ದೊಡ್ಡ ಅಂಗಡಿ ಬೀದಿ, ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಸೇರಿದಂತೆ ನಗರದ ವಿವಿಧೆಡೆ ತಳ್ಳುವ ಗಾಡಿಯಲ್ಲಿ  ಮಾರಾಟ ಮಾಡಲಾಗುತ್ತಿದೆ.

ಚಿಕ್ಕ ಹಾಗೂ ದೊಡ್ಡ ಗಾತ್ರದ ಎರಡೂ ಬಗೆಯ ಹಣ್ಣುಗಳಿಗೆ ಉತ್ತಮ ಬೇಡಿಕೆಯಿದೆ. ದಾರಿಹೋಕರು, ವಾಹನ ಸವಾರರು ದಾಹ ನೀಗಿಸಿಕೊಳ್ಳಲು ಕಲ್ಲಂಗಡಿ ಮೊರೆ ಹೋಗುತ್ತಿದ್ದಾರೆ. ಇದರಿಂದ ವ್ಯಾಪಾರಿಗಳಿಗೆ ಭರ್ಜರಿ ವಹಿವಾಟು ನಡೆಯುತ್ತಿದೆ.

‘ಗಾಜನೂರು, ತಾಳವಾಡಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ನಾಟಿ ತಳಿಯ ಹಣ್ಣುಗಳು ಪೂರೈಕೆಯಾಗುತ್ತಿವೆ. ನಾಟಿ ಹಣ್ಣಿಗೆ ಕೆ.ಜಿ.ಗೆ ₹ 12ರಿಂದ 15 ಇದೆ. ನಾಟಿ ಹಣ್ಣು ತಿನ್ನಲು ಮಾತ್ರ ಬಳಕೆಯಾಗುತ್ತದೆ. ವಾರಕ್ಕೆ 2 ಟನ್‌ನಷ್ಟು ವ್ಯಾಪಾರವಾಗುತ್ತದೆ’ ಎಂದು ವ್ಯಾಪಾರಿ ಮುನಾವರ್ ಪಾಷಾ ಹೇಳಿದರು.

‘ಸದ್ಯಕ್ಕೆ ದಾಳಿಂಬೆ, ಸಪೋಟ ಹಣ್ಣುಗಳಿಗಿಂತ ಕಲ್ಲಂಗಡಿಗೆ ಬೇಡಿಕೆ ಹೆಚ್ಚಾಗಿದೆ. ಮೈಸೂರು ಮತ್ತು ಜಿಲ್ಲೆಯ ವಿವಿಧೆಡೆಯಿಂದ ಮಾರುಕಟ್ಟೆಗೆ ಕಲ್ಲಂಗಡಿ ಹಣ್ಣು ಪೂರೈಕೆಯಾಗುತ್ತಿದೆ. ಗ್ರಾಹಕರ ಪ್ರತಿಕ್ರಿಯೆ ಉತ್ತಮವಾಗಿದ್ದು, ಚಿಕ್ಕ ಗಾತ್ರದ ಹಣ್ಣಿಗೆ ಹೆಚ್ಚು ಬೇಡಿಕೆಯಿದೆ’ ಎಂದು ಹಣ್ಣಿನ ವ್ಯಾಪಾರಿ ಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಚಿಕ್ಕ ಗಾತ್ರದ ಹಣ್ಣಿನ ಧಾರಣೆ ₹ 15ರಿಂದ 20ರಷ್ಟಿದೆ. ಹಣ್ಣನ್ನು ಕತ್ತರಿಸಿ ಹೋಳುಗಳನ್ನಾಗಿ ಮಾಡಿ ಮಾರಾಟ ಮಾಡುತ್ತಿದ್ದು, ಒಂದು ಹೋಳು ₹ 10ಕ್ಕೆ ಮಾರಾಟವಾಗುತ್ತಿದೆ. ಚಿಕ್ಕ ಗಾತ್ರದ ಹಣ್ಣು ಜ್ಯೂಸ್‌ ತಯಾರಿಕೆಗೆ ಹೆಚ್ಚು ಬಳಕೆಯಾಗುತ್ತಿದೆ.

‘ದೊಡ್ಡ ಗಾತ್ರದ ಹಣ್ಣುಗಳಲ್ಲಿ ನೀರಿನಾಂಶ ಹೆಚ್ಚಿರುತ್ತದೆ. ಹಣ್ಣಿನ ಅಂಶ ಸ್ವಲ್ಪ ಕಡಿಮೆ. ನೀರು ಹೆಚ್ಚಿರುವುದರಿಂದ ಸಿಹಿ ಕಡಿಮೆ ಇರುತ್ತದೆ. ಹಾಗಾಗಿ ಹೆಚ್ಚಿನ ಜನ ಚಿಕ್ಕಗಾತ್ರದ ಕಲ್ಲಂಗಡಿ ಹಣ್ಣನ್ನೇ ಇಷ್ಟಪಡುತ್ತಾರೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಶುಗರ್‌ಕ್ವೀನ್‌ ತಳಿಯ ಹಣ್ಣನ್ನು ಹೆಚ್ಚು ಬೆಳೆಯಲಾಗುತ್ತದೆ. ಈ ಹಣ್ಣು ಕೇರಳ, ತಮಿಳುನಾಡಿಗೆ ಹೆಚ್ಚು ರಫ್ತಾಗುತ್ತದೆ. ಎಕರೆ ಒಂದಕ್ಕೆ 18–22 ಟನ್‌  ಇಳುವರಿ ಸಿಗುತ್ತದೆ. ರೈತರಿಗೆ ಕೆ.ಜಿ.ಗೆ ₹ 6.5 ರಿಂದ 7 ಮಾತ್ರ ನೀಡಲಾಗುತ್ತಿದೆ. ಇದರಿಂದ ನಷ್ಟವಾಗುತ್ತಿದೆ’ ಎಂದು ಕಾವುದವಾಡಿ ಗ್ರಾಮದ ರೈತ ವಸಂತಕುಮಾರ್‌ ಬೇಸರ ವ್ಯಕ್ತಪಡಿಸಿದರು.

ಹೆಚ್ಚು ನೀರಿನ ಅಂಶ: ‘ಸಾಮಾನ್ಯವಾಗಿ ಬೇಸಿಗೆಯಲ್ಲಿ ದೇಹಕ್ಕೆ ಅಗತ್ಯವಿರುಷ್ಟು ನೀರಿನ ಅಂಶವನ್ನು ಕಲ್ಲಂಗಡಿ ಹಣ್ಣು ಪೂರೈಸುತ್ತದೆ. ಚರ್ಮದ ಕಾಂತಿಯನ್ನು ಹೆಚ್ಚಿಸಲು ಇದು ಸಹಕಾರಿ. ಹಾಗಾಗಿ, ಈ ಅವಧಿಯಲ್ಲಿ ಹೆಚ್ಚು ಬೇಡಿಕೆ’ ಎಂದು ವಸಂತಕುಮಾರ್ ತಿಳಿಸಿದರು.
ಇತರೆ ಹಣ್ಣುಗಳಿಗೆ ಹೋಲಿಸಿದರೆ, ಶೇ 80ರಷ್ಟು ನೀರಿನಂಶವನ್ನು ಹಿಡಿದಿಟ್ಟುಕೊಂಡಿರುವ ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಬಾಯಾರಿಕೆ ನೀಗುವುದಲ್ಲದೇ, ಆರೋಗ್ಯಕ್ಕೂ ಉತ್ತಮವಾಗಿದೆ ಎಂದು ತಿಳಿಸಿದರು.

ತರಕಾರಿ, ಹಣ್ಣು, ಹೂವಿನ ಬೆಲೆ ಸ್ಥಿರ: ಮಾರುಕಟ್ಟೆಯಲ್ಲಿ ತರಕಾರಿ, ಹೂವು, ಹಣ್ಣಿನ ಧಾರಣೆ ಕಳೆದವಾರದಷ್ಟೇ ಇದ್ದು, ಸ್ಥಿರತೆ ಕಾಪಾಡಿಕೊಂಡಿದೆ. ಟೊಮೆಟೊ, ಬೀಟ್‌ರೂಟ್‌ ಕೆ.ಜಿ. ಒಂದಕ್ಕೆ ₹ 10, ಬಿಳಿಬದನೆಕಾಯಿ, ಸೌತೆಕಾಯಿ, ಆಲೂಗಡ್ಡೆ, ಬೆಂಡೆಕಾಯಿ, ಹಸಿಮೆಣಸಿಕಾಯಿ ಕೆ.ಜಿ ₹ 20ರಂತೆ ಮಾರಾಟ ಆಗುತ್ತಿದೆ. ನುಗ್ಗೆಕಾಯಿ ₹ 80ಕ್ಕೆ ಇಳಿದಿದೆ.

ಹಣ್ಣು, ಹೂವು ಸ್ಥಿರ: ಮಾರುಕಟ್ಟೆಯಲ್ಲಿ ಹಣ್ಣು ಮತ್ತು ಹೂವಿನ ಧಾರಣೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಏಲಕ್ಕಿ ಬಾಳೆ ಹಣ್ಣು ಕೆ.ಜಿ.ಗೆ ₹ 50 ಹಾಗೂ ಪಚ್ಚಬಾಳೆ ಹಣ್ಣಿಗೆ ₹ 30ರಿಂದ 40 ಧಾರಣೆ ನಿಗದಿಪಡಿಸಲಾಗಿದೆ.

ಚೆಂಡು ಹೂವು ₹ 10, ಊಟಿ ಮಲ್ಲಿಗೆ ₹ 20ರಿಂದ 30, ಕಾಕಡ ₹ 20ರಿಂದ 30, ಕನಕಾಂಬರ ₹ 30ರಿಂದ 50 ಹಾಗೂ ಹೂವಿನ ಹಾರಕ್ಕೆ ₹ 50ರಿಂದ 300ರವರೆಗೂ ಬೆಲೆ ನಿಗದಿಪಡಿಸಲಾಗಿದೆ.

ಎಸ್. ಪ್ರತಾಪ್

ತರಕಾರಿ ಬೆಲೆ(ಕೆಜಿಗೆ)ಬೂದುಗುಂಬಳ ಕಾಯಿ ₹ 20
ಸಿಹಿಕುಂಬಳ ಕಾಯಿ ₹ 15
ಬೀನ್ಸ್‌ ₹ 30
ಕ್ಯಾರೆಟ್‌ ₹ 20
ಮೂಲಂಗಿ ₹ 15
ಹಸಿಶುಂಠಿ ₹ 40
ತೊಡೆಕಾಯಿ ₹ 30
ದಪ್ಪಮೆಣಸಿಕಾಯಿ ₹ 30
ಸಣ್ಣ ಈರುಳ್ಳಿ ₹ 40
ದಪ್ಪ ಈರುಳ್ಳಿ ₹ 30
ಬೆಳ್ಳುಳ್ಳಿ ₹ 30
ತೆಂಗಿನಕಾಯಿ(ಒಂದಕ್ಕೆ) ₹ 45

ಹಣ್ಣು ಧಾರಣೆ(ಕೆಜಿಗೆ)
ಸೇಬು ₹ 100 ರಿಂದ 120
ಕಿತ್ತಳೆ ₹ 60 ರಿಂದ 80
ಮೂಸಂಬಿ ₹ 80
ದ್ರಾಕ್ಷಿ ₹100
ದಾಳಿಂಬೆ ₹ 80
ಸಪೋಟ ₹ 60

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT