ನವದೆಹಲಿ: ‘ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚಿಸುವ ಮೂಲಕ ಪ್ರಜಾಪ್ರಭುತ್ವದ ಕೊಲೆ ಮಾಡಲಾಗಿದೆ’ ಎಂದು ಆರೋಪಿಸಿ ವಿರೋಧಪಕ್ಷಗಳು ಮಂಗಳವಾರ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಬಹಿಷ್ಕರಿಸಿವೆ.
ಸಂವಿಧಾನ ಅಂಗೀಕಾರಗೊಂಡು 70 ವರ್ಷ ಪೂರ್ಣಗೊಂಡ ಸಂದರ್ಭದ ಸ್ಮರಣಾರ್ಥ ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಉಭಯ ಸದನಗಳ ಜಂಟಿ ಅಧಿವೇಶನ ಹಮ್ಮಿಕೊಳ್ಳಲಾಗಿತ್ತು.
ಕಾಂಗ್ರೆಸ್, ಶಿವಸೇನಾ, ಡಿಎಂಕೆ, ಎಸ್ಪಿ, ಎನ್ಸಿಪಿ ಹಾಗೂ ಎಡಪಂಥೀಯ ಪಕ್ಷಗಳು ಈ ಕಾರ್ಯಕ್ರಮವನ್ನು ಬಹಿಷ್ಕರಿಸಿ ಸಂಸತ್ ಭವನದ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದವು.
ಅಂಬೇಡ್ಕರ್ ಪ್ರತಿಮೆ ಮುಂದೆ ಕೆಲವು ನಾಯಕರು ಸಂವಿಧಾನದ ಮುಖ್ಯಾಂಶಗಳನ್ನು ಓದಿದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಂಸದರಿಗೆ ಸಂವಿಧಾನ ಎತ್ತಿ ಹಿಡಿ ಯುವ ಪ್ರಮಾಣವಚನ ಬೋಧಿಸಿದರು.
‘ಇದು ಸಂವಿಧಾನವಿರೋಧಿ ಪ್ರತಿಭಟನೆ ಅಲ್ಲ. ಈಗಿನ ಸರ್ಕಾರವು ಸಂವಿಧಾನದ ಉದ್ದೇಶಗಳನ್ನು ಉಲ್ಲಂಘಿಸುತ್ತಿದೆ ಎಂದು ನೆನಪಿಸುವಂಥ ಪ್ರತಿಭಟನೆ’ ಎಂದು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಹೇಳಿದರು.
ಮಹಾರಾಷ್ಟ್ರದ ವಿಚಾರದಲ್ಲಿ ಕೇಂದ್ರದ ನೀತಿಯನ್ನು ನೋಡಿದರೆ, ಸಂವಿಧಾನವು ಸುರಕ್ಷಿತ ಕೈಗಳಲ್ಲಿದೆ ಎಂದೆನಿಸುವುದಿಲ್ಲ -ಮನಮೋಹನ ಸಿಂಗ್, ಮಾಜಿ ಪ್ರಧಾನಿ
ರಾಷ್ಟ್ರನಿರ್ಮಾಣದ ಕೆಲಸ ಸರ್ಕಾರವೊಂದರಿಂದಲೇ ಸಾಧ್ಯವಿಲ್ಲ. ಕರ್ತವ್ಯಗಳನ್ನು ನಿರ್ವಹಿಸುವ ಮೂಲಕ ನಾಗರಿಕರೂ ಅದರಲ್ಲಿ ಪ್ರಮುಖ ಪಾತ್ರ ವಹಿಸಬೇಕು ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ
ತಮ್ಮ ಕರ್ತವ್ಯಗಳನ್ನು ನಿರ್ವಹಿಸುವ ಮೂಲಕ ಪ್ರತಿಯೊಬ್ಬ ಸಂಸದರೂ ದೇಶದ ನಾಗರಿಕರಿಗೆ ಮಾದರಿಯಾಗಬೇಕು. ನಾವು ಹಾಗೆ ನಡೆದುಕೊಂಡರೆ ಮಾತ್ರ ನವ ಭಾರತ ನಿರ್ಮಾಣ ಸಾಧ್ಯ. ಓಂ ಬಿರ್ಲಾ, ಲೋಕಸಭೆಯ ಸ್ಪೀಕರ್