ಜೋಧಪುರ: ಕೊರೊನಾ ವೈರಸ್ ಸೋಂಕು ಪೀಡಿತ ಇರಾನ್ನಿಂದ ವಾಪಸ್ ಕರೆಸಿಕೊಳ್ಳಲಾಗಿರುವ 275 ಭಾರತೀಯರು ಇಂದು ರಾಜಸ್ಥಾನದ ಜೋಧಪುರ ತಲುಪಿದ್ದಾರೆ. ದೆಹಲಿ ಮೂಲಕ ಜೋಧಪುರಕ್ಕೆ ಬಂದ ಅವರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ವದೇಶಕ್ಕೆ ಬಂದವರನ್ನು ಸ್ಕ್ರೀನಿಂಗ್ಗೆ ಒಳಪಡಿಸಲಾಗಿದ್ದು, ಬಳಿಕ ಜೋಧಪುರದಲ್ಲಿರುವ ಸೇನಾ ಸ್ವಾಸ್ಥ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ.
275 ಜನರಲ್ಲಿ ನಾಲ್ವರು ಮಕ್ಕಳು, ಎರಡು ಶಿಶುಗಳು ಸೇರಿದಂತೆ 133 ಮಹಿಳೆಯರು ಮತ್ತು 142 ಮಂದಿ ಪುರುಷರು ಇದ್ದಾರೆ ಎಂದು ರಾಜಸ್ಥಾನದ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
‘ಇರಾನ್ನಿಂದ ಕರೆಸಿಕೊಳ್ಳಲಾದ ಭಾರತೀಯರನ್ನು ಸ್ಪೈಸ್ಜೆಟ್ ಮತ್ತು ಇಂಡಿಗೊ ವಿಮಾನಗಳಲ್ಲಿ ಜೋಧಪುರಕ್ಕೆ ಕರೆದೊಯ್ಯಲಾಗಿದೆ. ಆಪರೇಷನ್ ನಮಸ್ತೆ! ಕೋವಿಡ್–19ನಿಂದ ಭಾರತೀಯರನ್ನು ರಕ್ಷಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.