ನವದೆಹಲಿ: ‘ಲಾಕ್ಡೌನ್ 3.0’ ಮುಕ್ತಾಯಕ್ಕೆ ಆರು ದಿನಗಳು ಉಳಿದಿದ್ದು ಮುಂದಿನ ಕಾರ್ಯಯೋಜನೆಯ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ವಿಡಿಯೊ ಸಂವಾದ ನಡೆಸಲಿದ್ದಾರೆ.
ಕುಸಿದಿರುವ ಆರ್ಥಿಕತೆಗೆ ಚೇತರಿಕೆ ನೀಡುವ ಸಲುವಾಗಿ ಲಾಕ್ಡೌನ್ ಅನ್ನು ಇನ್ನಷ್ಟು ಸಡಿಲಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಲವು ತೋರುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.
‘ಕೋವಿಡ್–19 ಕುರಿತು ಮೋದಿ ಅವರು ಐದನೇ ಬಾರಿಗೆ ಮುಖ್ಯಮಂತ್ರಿ ಗಳ ಜತೆ ಸಂವಾದ ನಡೆಸಲಿದ್ದಾರೆ. ಲಾಕ್ಡೌನ್ ಅನ್ನು ಹಂತಹಂತವಾಗಿ ಹಿಂತೆಗೆದುಕೊಳ್ಳುವ ಬಗ್ಗೆ ಈ ಸಂದರ್ಭದಲ್ಲಿ ಚರ್ಚಿಸಲಾಗು ವುದು’ ಎಂದು ಪ್ರಧಾನಿ ಕಚೇರಿಯು ಭಾನುವಾರ ಟ್ವೀಟ್ ಮಾಡಿದೆ.
‘ಆರ್ಥಿಕ ಚಟುವಟಿಕೆಗಳನ್ನು ಚುರುಕುಗೊಳಿಸುವುದು ಮತ್ತು ಕೊರೊನಾ ಕೆಂಪು ವಲಯಗಳನ್ನು ಕಿತ್ತಳೆ ವಲಯಗಳನ್ನಾಗಿ ಮತ್ತು ಕಿತ್ತಳೆ ವಲಯಗಳನ್ನು ಹಸಿರು ವಲಯಗಳ ನ್ನಾಗಿ ಪರಿವರ್ತಿಸುವ ವಿಚಾರಕ್ಕೆ ಸಂವಾದದಲ್ಲಿ ಆದ್ಯತೆ ನೀಡಲಾಗು ವುದು’ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಈ ಹಿಂದೆ, ಏಪ್ರಿಲ್ 27ರಂದು ಪ್ರಧಾನಿ ಅವರು ಮುಖ್ಯಮಂತ್ರಿಗಳ ಜತೆ ವಿಡಿಯೊ ಸಂವಾದ ನಡೆಸಿದ್ದರು. ಆಗ ದೇಶದಲ್ಲಿ ಒಟ್ಟಾರೆ 28,000 ಕೋವಿಡ್ ದೃಢಪಟ್ಟ ಪ್ರಕರಣಗಳಿದ್ದವು. ಈಗ ಆ ಸಂಖ್ಯೆಯು 63,000 ದಾಟಿದೆ. ಆದ್ದರಿಂದ ಲಾಕ್ಡೌನ್ ಅನ್ನು ಸಂಪೂರ್ಣವಾಗಿ ಹಿಂಪಡೆಯುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
‘ಕಂಟೈನ್ಮೆಂಟ್ ಪ್ರದೇಶದಲ್ಲಿ ಮಾತ್ರ ಲಾಕ್ಡೌನ್ ಅನ್ನು ಜಾರಿ ಮಾಡಿ, ಉಳಿದ ಪ್ರದೇಶಗಳಲ್ಲಿ ಸಡಿಲಿಸುವ ಮೂಲಕ ಆರ್ಥಿಕ ಚಟುವಟಿಕೆ
ಗಳಿಗೆ ಅನುಮತಿ ನೀಡಬೇಕು’ ಎಂಬ ಅಭಿಪ್ರಾಯವನ್ನು ದೆಹಲಿ ಸೇರಿದಂತೆ ಕೆಲವು ರಾಜ್ಯಗಳು ವ್ಯಕ್ತಪಡಿಸುತ್ತಿವೆ. ಆದರೆ, ಲಾಕ್ಡೌನ್ ಅನ್ನು ಮೇ 29ರವರೆಗೆ ವಿಸ್ತರಿಸುವುದಾಗಿ ತೆಲಂಗಾಣ ಹೇಳಿದೆ. ಮಹಾರಾಷ್ಟ್ರವೂ ಇಂಥ ತೀರ್ಮಾನ ಕೈಗೊಳ್ಳುವ ಸೂಚನೆ ನೀಡಿದೆ.
40 ಲಕ್ಷ ದಾಟಿದ ಸೋಂಕಿತರ ಸಂಖ್ಯೆ
ಪ್ಯಾರಿಸ್ (ಎಎಫ್ಪಿ): ವಿಶ್ವದಲ್ಲಿ ಕೋವಿಡ್ ಪೀಡಿತರ ಸಂಖ್ಯೆ 40 ಲಕ್ಷ ಗಡಿ ದಾಟಿರುವುದು ಆತಂಕ ಹೆಚ್ಚಿಸಿದೆ. ಸೋಂಕು ಹರಡುವುದನ್ನು ತಡೆಯುವ ಸಂಬಂಧ ಹೇರಲಾಗಿ ರುವ ಲಾಕ್ಡೌನ್ ಅನ್ನು ಸಡಿಲ ಗೊಳಿಸಲು ಅನೇಕ ರಾಷ್ಟ್ರಗಳು ಭಾನುವಾರ ತೀರ್ಮಾನಿಸಿವೆ.
l ಮಧ್ಯಪ್ರದೇಶದಲ್ಲಿ ಕಳೆದ 24 ಗಂಟೆ ಗಳಲ್ಲಿ ರಸ್ತೆ ಅಪಘಾತಕ್ಕೆ 11 ಮಂದಿ ವಲಸೆ ಕಾರ್ಮಿಕರು ಬಲಿಯಾಗಿದ್ದಾರೆ
l 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಲ್ಲಿ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ
l ಮಹಾರಾಷ್ಟ್ರದಲ್ಲಿ ಇದುವರೆಗೆ 832 ಮಂದಿ ಸಾವು
l ಗುಜರಾತ್ನಲ್ಲಿ ಒಂದೇ ದಿನ 398 ಹೊಸ ಪ್ರಕರಣಗಳು ಪತ್ತೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.