ನವದೆಹಲಿ:ವಿರ್ಸಜನೆಯಾದ ಮಲಮೂತ್ರದ ನಡುವೆಯೇ ಮಲಗಿದ್ದ ಪುಟಾಣಿ, ಕುಡಿದು ಜಗತ್ತಿನ ಪರಿವೆಯೇ ಇಲ್ಲದಂತೆ ಬಿದ್ದಿದ್ದ ತಂದೆ...ಹೀಗೆ ತಂದೆಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮೂರು ವರ್ಷದ ಹುಡುಗಿಯನ್ನು ದೆಹಲಿಯ ಮಹಿಳಾ ಆಯೋಗ ರಕ್ಷಿಸಿದೆ.
ಮಲಮೂತ್ರ ವಿಸರ್ಜನೆಯಾದರೂ ಎಷ್ಟೋ ದಿನಗಳಿಂದ ಬದಲಿಸದ ಡೈಪರ್, ಸ್ನಾನವಿಲ್ಲ, ಕೊಳಕು ತೆಗೆದಿಲ್ಲ. ಇದರಿಂದ ಪುಟಾಣಿಯ ಆರೋಗ್ಯ ಹದಗೆಟ್ಟಿದ್ದು, ಹಲವು ಭಾಗಗಳಲ್ಲಿ ಸೋಂಕು ಉಂಟಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಹಿಳಾ ಆಯೋಗ ತಿಳಿಸಿದೆ.
ಪುಟಾಣಿ ಹೊಟ್ಟೆ ಹಸಿವಿನಿಂದ ಅಳುತ್ತಿದ್ದರೆ, ತಂದೆ ಹಾಲಿನ ಬಾಟಲಿಗೆ ಮದ್ಯ ತುಂಬಿಸಿ ಆಕೆಯ ಬಾಯಿಗೆ ಇಡುತ್ತಿದ್ದ ಎಂದು ನೆರೆಯವರು ದೂರಿದ್ದಾರೆ.
ಸಹಾಯವಾಣಿ 181ಕ್ಕೆ ಬಂದ ದೂರಿನ ಮೇರೆಗೆ ದೆಹಲಿಯ ಮಹಿಳಾ ಆಯೋಗ ಇಲ್ಲಿನ ಪ್ರೇಮ್ ನಗರದಲ್ಲಿ ಮೂರು ವರ್ಷದ ಹುಡುಗಿಯನ್ನು ಶುಕ್ರವಾರ ರಕ್ಷಿಸಿದೆ.
ಪುಟಾಣಿಗೆ ಆಕೆಯ ತಂದೆ ಕಳೆದ ಮೂರು ದಿನಗಳಿಂದ ಹಾಲು, ಆಹಾರ ಏನನ್ನೂ ನೀಡಿಲ್ಲ ಎಂದು ಸಹಾಯವಾಣಿಗೆ ಕರೆ ಮಾಡಿದ ವ್ಯಕ್ತಿ ದೂರು ನೀಡಿದ್ದರು.