ನವದೆಹಲಿ: ‘ದಕ್ಷಿಣ ರಿಡ್ಜ್ ಭಾಗದಲ್ಲಿ ಅರಣ್ಯ ಭೂಮಿ ಒತ್ತುವರಿ ವಿಷಯದಲ್ಲಿ ತಮಾಷೆ ಬೇಕಿಲ್ಲ, ನಿಖರ ಮಾಹಿತಿ ಬೇಕು’ ಎಂದು ರಾಷ್ಟ್ರೀಯ ಹಸಿರು ನ್ಯಾಯಪೀಠ ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಕಂದಾಯ ಇಲಾಖೆ ಪ್ರತಿ ಬಾರಿಯೂ ಬೇರೆ ಬೇರೆ ಅಂಕಿ ಅಂಶಗಳನ್ನು ನೀಡುತ್ತಿದೆ. ಇದು ಹೇಗೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ ನ್ಯಾಯಮೂರ್ತಿ ರಘುವೇಂದ್ರ ಎಸ್ ರಾಥೋಡ್ ನೇತೃತ್ವದ ಪೀಠ, ನಿಖರ ಮಾಹಿತಿ ನೀಡಲು ಇನ್ನೂ ಎಷ್ಟು ದಿನ ಬೇಕು? ಎಂದು ಪ್ರಶ್ನಿಸಿತು.
‘ತೋರ್ಪಡಿಕೆಗಾಗಿ ಅರೆ–ಬರೆ ಮಾಹಿತಿ ನೀಡಿದರೆ ಒಪ್ಪುವುದಿಲ್ಲ. ರಿಡ್ಜ್ನ ಗಡಿ ಗುರುತಿಸುವಿಕೆ ಕೆಲಸ ಎಷ್ಟಾಗಿದೆ, ಬಾಕಿ ಕೆಲಸ ಪೂರ್ಣಕ್ಕೆ ಇನ್ನೂ ಎಷ್ಟು ಸಮಯ ಬೇಕು ಎಂಬುದನ್ನು ತಿಳಿಸಿ’ ಎಂದು ಕೇಳಿತು.
ಕಂದಾಯ ಮತ್ತು ಅರಣ್ಯ ಇಲಾಖೆಗೆ ಒಂದು ತಿಂಗಳ ಕಾಲವಕಾಶ ನೀಡಿದ ಎನ್ಜಿಟಿ, ‘ಎಷ್ಟು ಪ್ರಮಾಣದ ಅರಣ್ಯ ಒತ್ತುವರಿಯಾಗಿದೆ ಎಂಬುದರ ಬಗ್ಗೆ ನಿಖರ ಮಾಹಿತಿಯೊಂದಿಗೆ ಬನ್ನಿ’ ಎಂದು ಸೂಚಿಸಿತು.
2013ರಿಂದ ಈ ವಿಷಯ ಬಾಕಿ ಉಳಿದಿದೆ. ಮಾರ್ಚ್ 1ರೊಳಗೆ ಮಾಹಿತಿ ನೀಡದಿದ್ದರೆ ಸಂಬಂಧಿಸಿದವರಿಗೆ ದಿನಕ್ಕೆ ₹5,000 ದಂಡ ವಿಧಿಸಲಾಗುವುದು ಎಂದು ಪೀಠ ಎಚ್ಚರಿಸಿತು.
ದಕ್ಷಿಣ ರಿಡ್ಜ್ ಗಡಿ ಗುರುತಿಸುವಿಕೆಗೆ ಆಗುತ್ತಿರುವ ವಿಳಂಬಕ್ಕೆ ಕಾರಣ ನೀಡುವಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕಂದಾಯ ಇಲಾಖೆ ಕಾರ್ಯದರ್ಶಿಗೆ ಎನ್ಜಿಟಿ ಇತ್ತೀಚೆಗೆ ಸಮನ್ಸ್ ನೀಡಿತ್ತು.
ಈ ಪ್ರದೇಶದಲ್ಲಿ ಅರಣ್ಯ ಭೂಮಿ ಒತ್ತುವರಿಯಾಗಿದ್ದು, ತೆರವುಗೊಳಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ದಕ್ಷಿಣ ದೆಹಲಿಯ ನಿವಾಸಿ ಸೋನಿಯಾ ಘೋಷ್ ಹಾಗೂ ಇತರರು ಎನ್ಜಿಟಿಗೆ ಅರ್ಜಿ ಸಲ್ಲಿಸಿದ್ದರು.