ನವದೆಹಲಿ: ಉತ್ತರಾಖಂಡದ ಚೀನಾ ಗಡಿಯಲ್ಲಿ 17,000 ಅಡಿ ಎತ್ತರದಲ್ಲಿ ಲಿಪುಲೇಶ್ ಪಾಸ್ ಸಂಪರ್ಕಿಸುವಂತೆ ಭಾರತ ನಿರ್ಮಿಸುತ್ತಿರುವ ರಸ್ತೆಯ ಬಗ್ಗೆ ನೇಪಾಳ ವ್ಯಕ್ತಪಡಿಸಿದ ತಕರಾರಿಗೆ ಭಾರತ ಸೂಕ್ತ ಪ್ರತ್ಯುತ್ತರ ನೀಡಿದೆ.
‘ಇದು ಭಾರತದ ಗಡಿಯೊಳಗಿನ ಕಾಮಗಾರಿ. ವಿವಾದಗಳನ್ನುಶಾಂತಿಯುತವಾಗಿ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳೋಣ’ ಎಂದು ಭಾರತ ಸರ್ಕಾರವು ನೇಪಾಳಕ್ಕೆ ತಿಳಿಸಿದೆ.
‘ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆಭಾರತ ಸರ್ಕಾರದ ಏಕಪಕ್ಷೀಯ ನಿರ್ಧಾರವು ಎರಡೂ ದೇಶಗಳ ಸಂಬಂಧದ ಮೇಲೆ ಪರಿಣಾಮ ಬೀರಿದೆ. ಎರಡೂ ದೇಶಗಳು ಗಡಿವಿವಾದವನ್ನು ಶಾಂತಿಯುತ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು ಎಂಬ ನಿರ್ಣಯಕ್ಕೂ ಇದು ಧಕ್ಕೆ ತಂದಿದೆ’ ಎಂದು ನೇಪಾಳ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೆ ನೀಡಿತ್ತು.
ಈ ಆಕ್ಷೇಪಕ್ಕೆ ಪ್ರತಿಕ್ರಿಯೆ ನೀಡಿದ್ದ ಭಾರತೀಯ ವಿದೇಶಾಂಗ ವ್ಯವಹಾರಗಳ ಇಲಾಖೆಯು, ‘ಕೈಲಾಸ ಮಾನಸ ಸರೋವರ ಯಾತ್ರೆಗೆ ಸಂಪರ್ಕ ಕಲ್ಪಿಸುವರಸ್ತೆಯು ಭಾರತದ ಗಡಿಯೊಳಗೇ ಇದೆ. ಈಗಾಗಲೇ ಚಾಲ್ತಿಯಲ್ಲಿದ್ದ ರಸ್ತೆಯನ್ನು ಸುಧಾರಿಸುತ್ತಿದ್ದೇವೆ ಅಷ್ಟೇ’ ಎಂದು ಸ್ಪಷ್ಟಪಡಿಸಿದೆ.
‘ಗಡಿ ವಿವಾದ ಪರಿಹರಿಹರಿಸಲು ಭಾರತ ಮತ್ತು ನೇಪಾಳಗಳು ಪೂರ್ವ ನಿರ್ಧಾರಿತ ವ್ಯವಸ್ಥೆ ಹೊಂದಿವೆ. ಗಡಿ ನಿರ್ಧಾರ ಪ್ರಕ್ರಿಯೆಯು ಈಗಲೂ ಚಾಲ್ತಿಯಲ್ಲಿದೆ. ನೇಪಾಳದೊಂದಿಗೆ ನಾವು ಹೊಂದಿರುವ ಸೌಹಾರ್ದಯುತ ಸಂಬಂಧವನ್ನು ದೃಷ್ಟಿಯಲ್ಲಿರಿಸಿಕೊಂಡುಗಡಿ ವಿವಾದವನ್ನು ಮಾತುಕತೆಯ ಮೂಲಕವೇ ಪರಿಹರಿಸಿಕೊಳ್ಳಬೇಕು ಎಂಬುದಕ್ಕೆ ಭಾರತವು ಬದ್ಧವಾಗಿದೆ’ ಎಂದು ಹೇಳಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ಶುಕ್ರವಾರ ಉದ್ಘಾಟಿಸಿದ 80 ಕಿ.ಮೀ. ಉದ್ದದ ರಸ್ತೆಯು ಟಿಬೆಟ್ನಲ್ಲಿರುವ ಕೈಲಾಸ ಮತ್ತು ಮಾನಸ ಸರೋವರ ಯಾತ್ರೆ ಮಾಡುವವರಿಗೆ ಅನುಕೂಲ ಕಲ್ಪಿಸಲಿದೆ.