ಮಾನಸ ಸರೋವರ ರಸ್ತೆಗೆ ನೇಪಾಳದ ತಕರಾರು: ಸಮಾಧಾನದ ಉತ್ತರ ಕೊಟ್ಟ ಭಾರತ

ನವದೆಹಲಿ: ಉತ್ತರಾಖಂಡದ ಚೀನಾ ಗಡಿಯಲ್ಲಿ 17,000 ಅಡಿ ಎತ್ತರದಲ್ಲಿ ಲಿಪುಲೇಶ್ ಪಾಸ್ ಸಂಪರ್ಕಿಸುವಂತೆ ಭಾರತ ನಿರ್ಮಿಸುತ್ತಿರುವ ರಸ್ತೆಯ ಬಗ್ಗೆ ನೇಪಾಳ ವ್ಯಕ್ತಪಡಿಸಿದ ತಕರಾರಿಗೆ ಭಾರತ ಸೂಕ್ತ ಪ್ರತ್ಯುತ್ತರ ನೀಡಿದೆ.
‘ಇದು ಭಾರತದ ಗಡಿಯೊಳಗಿನ ಕಾಮಗಾರಿ. ವಿವಾದಗಳನ್ನು ಶಾಂತಿಯುತವಾಗಿ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳೋಣ’ ಎಂದು ಭಾರತ ಸರ್ಕಾರವು ನೇಪಾಳಕ್ಕೆ ತಿಳಿಸಿದೆ.
‘ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಭಾರತ ಸರ್ಕಾರದ ಏಕಪಕ್ಷೀಯ ನಿರ್ಧಾರವು ಎರಡೂ ದೇಶಗಳ ಸಂಬಂಧದ ಮೇಲೆ ಪರಿಣಾಮ ಬೀರಿದೆ. ಎರಡೂ ದೇಶಗಳು ಗಡಿವಿವಾದವನ್ನು ಶಾಂತಿಯುತ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು ಎಂಬ ನಿರ್ಣಯಕ್ಕೂ ಇದು ಧಕ್ಕೆ ತಂದಿದೆ’ ಎಂದು ನೇಪಾಳ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೆ ನೀಡಿತ್ತು.
ಈ ಆಕ್ಷೇಪಕ್ಕೆ ಪ್ರತಿಕ್ರಿಯೆ ನೀಡಿದ್ದ ಭಾರತೀಯ ವಿದೇಶಾಂಗ ವ್ಯವಹಾರಗಳ ಇಲಾಖೆಯು, ‘ಕೈಲಾಸ ಮಾನಸ ಸರೋವರ ಯಾತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆಯು ಭಾರತದ ಗಡಿಯೊಳಗೇ ಇದೆ. ಈಗಾಗಲೇ ಚಾಲ್ತಿಯಲ್ಲಿದ್ದ ರಸ್ತೆಯನ್ನು ಸುಧಾರಿಸುತ್ತಿದ್ದೇವೆ ಅಷ್ಟೇ’ ಎಂದು ಸ್ಪಷ್ಟಪಡಿಸಿದೆ.
‘ಗಡಿ ವಿವಾದ ಪರಿಹರಿಹರಿಸಲು ಭಾರತ ಮತ್ತು ನೇಪಾಳಗಳು ಪೂರ್ವ ನಿರ್ಧಾರಿತ ವ್ಯವಸ್ಥೆ ಹೊಂದಿವೆ. ಗಡಿ ನಿರ್ಧಾರ ಪ್ರಕ್ರಿಯೆಯು ಈಗಲೂ ಚಾಲ್ತಿಯಲ್ಲಿದೆ. ನೇಪಾಳದೊಂದಿಗೆ ನಾವು ಹೊಂದಿರುವ ಸೌಹಾರ್ದಯುತ ಸಂಬಂಧವನ್ನು ದೃಷ್ಟಿಯಲ್ಲಿರಿಸಿಕೊಂಡು ಗಡಿ ವಿವಾದವನ್ನು ಮಾತುಕತೆಯ ಮೂಲಕವೇ ಪರಿಹರಿಸಿಕೊಳ್ಳಬೇಕು ಎಂಬುದಕ್ಕೆ ಭಾರತವು ಬದ್ಧವಾಗಿದೆ’ ಎಂದು ಹೇಳಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಉದ್ಘಾಟಿಸಿದ 80 ಕಿ.ಮೀ. ಉದ್ದದ ರಸ್ತೆಯು ಟಿಬೆಟ್ನಲ್ಲಿರುವ ಕೈಲಾಸ ಮತ್ತು ಮಾನಸ ಸರೋವರ ಯಾತ್ರೆ ಮಾಡುವವರಿಗೆ ಅನುಕೂಲ ಕಲ್ಪಿಸಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.