ಫರೂಕಾಬಾದ್: ಎಂಟು ಗಂಟೆಗಳ ಸತತ ಪ್ರಯತ್ನದ ನಂತರ ಒತ್ತೆಯಾಳಾಗಿದ್ದ 23 ಮಕ್ಕಳನ್ನು ಬಿಡುಗಡೆಗೊಳಿಸುವಲ್ಲಿ ಉತ್ತರ ಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ. ಒತ್ತೆಯಾಳು ಮಾಡಿಕೊಂಡಿದ್ದ ಸುಭಾಶ್ನನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಇಲ್ಲಿನ ಕಸಾರಿಯಾ ಗ್ರಾಮದಲ್ಲಿ ಸುಭಾಶ್ ಭಾತಮ್ ಎನ್ನುವ ವ್ಯಕ್ತಿ ಗುರುವಾರ (ಜನವರಿ 30) ಸಂಜೆ ವೇಳೆಗೆ 23 ಮಕ್ಕಳನ್ನು ತನ್ನ ಮನೆಯಲ್ಲಿ ಬಂಧಿ ಮಾಡಿಕೊಂಡಿದ್ದ. ತನ್ನ ಮಗಳ ಹುಟ್ಟಿದ ದಿನದ ಸಂಭ್ರಮಾಚರಣೆಗಾಗಿ ಗ್ರಾಮದ ಸುಮಾರು 6 ತಿಂಗಳು ಮಗುವಿನಿಂದ ಹಿಡಿದು 15 ವರ್ಷದ ಮಕ್ಕಳನ್ನು ಆತ ತನ್ನ ಮನೆಗೆ ಕರೆದಿದ್ದ.
ಎಷ್ಟು ಹೊತ್ತಾದರೂ ಮನೆಗೆ ಮರಳದ ಮಕ್ಕಳ ಬಗ್ಗೆ ಕಳವಳಗೊಂಡ ಪೋಷಕರು, ಸುಭಾಷ್ ಮನೆ ಬಳಿ ಬಂದು ನೋಡಿದಾಗ, ಮಕ್ಕಳನ್ನು ಬಂಧಿಸಿ ಇಟ್ಟುಕೊಂಡಿರುವ ತಿಳಿದುಬಂದಿದೆ. ನಂತರ, ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುಭಾಷ್ನ ಪತ್ನಿಮನೆಯಿಂದ ತಪ್ಪಿಸಿಕೊಳ್ಳಲು ಮುಂದಾದಾಗ, ಗ್ರಾಮಸ್ಥರು ಆಕೆಯನ್ನು ಥಳಿಸಿ, ಆಕೆಯ ಮೇಲೆ ಕಲ್ಲು ತೂರಿದ್ದಾರೆ. ತಲೆಗೆ ಗಂಭೀರ ಗಾಯವಾದ ಆಕೆಯನ್ನು ಪೊಲೀಸರು ರಕ್ಷಿಸಿ, ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಗುರುವಾರ ರಾತ್ರಿ ಆಕೆ ಸಾವನ್ನಪ್ಪಿದ್ದಾರೆ.
‘ಸುಭಾಷ್, ಮಾನಸಿಕ ಸ್ಥಿಮಿತ ಇಲ್ಲದವನಾಗಿದ್ದ ಎನಿಸುತ್ತದೆ. ಆತನೊಂದಿಗೆ ನಾವು ಮಾತನಾಡಲು ಪ್ರಯತ್ನ ನಡೆಸಿದೆವು. ಆದರೆ, ಆತ ನಮ್ಮ ಮೇಲೆ ಗುಂಡಿನ ದಾಳಿ ನಡೆಸಿದ. ಘಟನೆಯಲ್ಲಿ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ’ ಎಂದು ಪೊಲೀಸ್ ಮಹಾನಿರ್ದೇಶಕ ಒ.ಪಿ. ಸಿಂಗ್ ಹೇಳಿದ್ದಾರೆ.
ಆತ ಮೇಲೆ ಕೊಲೆ ಆರೋಪವಿದ್ದು,ಜಾಮೀನಿನ ಮೇಲೆ ಹೊರಗಿದ್ದನು.
ಬಹುಮಾನ ಘೋಷಣೆ: ಮಕ್ಕಳನ್ನು ರಕ್ಷಣೆ ಮಾಡಿದ ಉತ್ತರ ಪ್ರದೇಶ ಪೊಲೀಸರನ್ನು ಶ್ಲಾಘಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಕ್ಷಣಾ ಕಾರ್ಯಚರಣೆ ನಡೆಸಿದ ಪೊಲೀಸರ ತಂಡಕ್ಕೆ ₹10 ಲಕ್ಷ ಬಹುಮಾನ ಘೋಷಿಸಿದ್ದಾರೆ.