ಮಧ್ಯ ದೆಹಲಿಯ ಕರೋಲ್ಬಾಗ್ ಹೋಟೆಲ್ನಲ್ಲಿ ಅಗ್ನಿ ದುರಂತ: 17 ಮಂದಿ ದುರ್ಮರಣ

ನವದೆಹಲಿ: ಇಲ್ಲಿನ ಮಧ್ಯ ದೆಹಲಿಯ ಕರೋಲ್ಬಾಗ್ ಪ್ರದೇಶದಲ್ಲಿದ್ದ ನಾಲ್ಕು ಮಹಡಿಯ ಹೋಟೆಲ್ನಲ್ಲಿ ಸಂಭವಿಸಿದ ಅಗ್ನಿ ಅನಾಹುತಕ್ಕೆ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಜೀವ ಉಳಿಸಿಕೊಳ್ಳಲು ಮಗು ಸಹಿತ ಇಬ್ಬರು ಕಟ್ಟಡದಿಂದ ಜಿಗಿದು ಬಲಿಯಾಗಿದ್ದಾರೆ.
ರಾಜಧಾನಿಯ ಹೃದಯಭಾಗದಲ್ಲಿರುವ 45 ಕೊಠಡಿಗಳಿರುವ ’ಅರ್ಪಿತ್ ಪ್ಯಾಲೇಸ್ ಹೋಟೆಲ್‘ನ ಎರಡನೇ ಮಹಡಿಯಲ್ಲಿ ಮಂಗಳವಾರ ಬೆಳಿಗ್ಗೆ 3.30ರ ಸುಮಾರಿಗೆ ಬೆಂಕಿ ಕಾಣಿಸಕೊಂಡಿದೆ. ಈ ವೇಳೆ ಹೋಟೆಲ್ನಲ್ಲಿ ಗಾಢನಿದ್ರೆಯಲ್ಲಿದ್ದ 53 ಮಂದಿ ಪೈಕಿ 17 ಮಂದಿ ಸಾವನ್ನಪ್ಪಿದ್ದು, 35 ಮಂದಿ ಗಾಯಗೊಂಡಿದ್ದಾರೆ. ಒಬ್ಬರು ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ: ದೆಹಲಿ ಹೋಟೆಲ್ ಅಗ್ನಿ ಅವಘಡ: 17 ಮಂದಿ ದುರ್ಮರಣ; ನಿರ್ಲಕ್ಷ್ಯವೇ ಕಾರಣ ?
ಮೃತರ ಪೈಕಿ 13 ಮಂದಿಯ ಗುರುತು ಪತ್ತೆಹಚ್ಚಲಾಗಿದ್ದು, ಇದರಲ್ಲಿ ಮೂವರು ಕೇರಳ, ಮತ್ತಿಬ್ಬರು ಮ್ಯಾನ್ಮಾರ್ ದೇಶದವರು.
’ಬೆಳಿಗ್ಗೆ 4.35ರ ಸುಮಾರಿಗೆ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ತಲುಪಿದ್ದು, 24ಕ್ಕೂ ಅಧಿಕ ವಾಹನಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ‘ ಎಂದು ಡಿಸಿಪಿ ಮಧುರ್ ವರ್ಮಾ ತಿಳಿಸಿದ್ದಾರೆ.
ಮ್ಯಾಜಿಸ್ಟ್ರೇಟ್ ತನಿಖೆ
ಅಗ್ನಿದುರಂತದ ಕುರಿತಂತೆ ದೆಹಲಿ ಗೃಹ ಸಚಿವ ಸತ್ಯೇಂದರ್ ಜೈನ್ ಅವರು ಮ್ಯಾಜಿಸ್ಟಿರಿಯಲ್ ತನಿಖೆಗೆ ಆದೇಶ ನೀಡಿದ್ದಾರೆ. ಅಲ್ಲದೇ, ಐದು ಮಹಡಿಗಿಂತ ಹೆಚ್ಚಿರುವ ಎಲ್ಲ ಕಟ್ಟಡಗಳ ತಪಾಸಣೆ ನಡೆಸಿ, ಅಗ್ನಿಸುರಕ್ಷತೆ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತಂತೆ ವಾರದ ಒಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮದುವೆಗೆ ಬಂದವರು ಬೆಂದು ಹೋದರು: ಕೇರಳದ ಎರ್ನಾಕುಲಂ ಜಿಲ್ಲೆಯ 13 ಮಂದಿ ಗಾಜಿಯಾಬಾದ್ನಲ್ಲಿ ನಡೆಯಲಿರುವ ಮದುವೆಯೊಂದರಲ್ಲಿ ಭಾಗವಹಿಸಲು ಇದೇ ಹೋಟೆಲ್ನ ನಾಲ್ಕು ಕೊಠಡಿಯಲ್ಲಿ ತಂಗಿದ್ದರು. ಬೆಳಿಗ್ಗೆ ಮದುವೆಗೆ ಹೊರಡಲು ತಯಾರಿಯಲ್ಲಿದ್ದ ಸಂದರ್ಭದಲ್ಲೇ ದುರಂತ ಸಂಭವಿಸಿದ ಕಾರಣ, ಮೂವರು ಉಸಿರುಗಟ್ಟಿ ಸಾವನ್ನಪ್ಪಿದ್ದು, ಉಳಿದ 10 ಮಂದಿ ಪಾರಾಗಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.