ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಪ್ರಥಮಗಳಿಗೆ ಸಾಕ್ಷಿಯಾದ ಗಣರಾಜ್ಯೋತ್ಸವ ಪೆರೇಡ್

Last Updated 28 ಜನವರಿ 2020, 1:11 IST
ಅಕ್ಷರ ಗಾತ್ರ
ADVERTISEMENT
""
""
""
""
""
""
""
""

ನವದೆಹಲಿಯಲ್ಲಿಈ ವರ್ಷ ನಡೆದಗಣರಾಜ್ಯೋತ್ಸವ ಪೆರೇಡ್ ಹಲವು ಪ್ರಥಮಗಳಿಗೆ ಸಾಕ್ಷಿಯಾಯಿತು. ಅಂಥ ಕೆಲ ಪ್ರಮುಖ ಸಂಗತಿಗಳ ಪರಿಚಯ ಇಲ್ಲಿದೆ.

ಯುದ್ಧ ಸ್ಮಾರಕದಲ್ಲಿ ಹುತಾತ್ಮರಿಗೆ ನಮನ ಸಲ್ಲಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ

ಯುದ್ಧ ಸ್ಮಾರಕದಲ್ಲಿ ಹುತಾತ್ಮರಿಗೆ ಗೌರವ

ಗಣರಾಜ್ಯೋತ್ಸವ ದಿನದಂದುರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಹುತಾತ್ಮರಿಗೆ ಗೌರವ ಅರ್ಪಿಸಿದರು.ಫೆ.25, 2019ರಂದು ಪ್ರಧಾನಿ ನರೇಂದ್ರ ಮೋದಿ ಯುದ್ಧ ಸ್ಮಾರಕ ಉದ್ಘಾಟಿಸಿದ್ದರು. ಈ ಬಾರಿ ಯೋಧರುಅಲ್ಲಿಯೇ ಹುತಾತ್ಮರಿಗೆ ಸಲಾಮಿ ಶಸ್ತ್ರ್ ಮತ್ತು ಶೋಕ್‌ ಶಸ್ತ್ರ್ ಮತ್ತು ವಾದ್ಯಗೋಷ್ಠಿಯಲ್ಲಿ ಶೋಕಗೀತೆಗಳನ್ನು ನುಡಿಸುವ ಮೂಲಕಗೌರವ ಸಲ್ಲಿಸಿದರು. ಎರಡು ನಿಮಿಷಗಳ ಮೌನಾಚರಣೆಯೂ ನಡೆಯಿತು.ಈವರೆಗೆ ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಗೆ ಗೌರವಾರ್ಪಣೆ ಮಾಡಲಾಗುತ್ತಿತ್ತು.

ಜನರಲ್ ಬಿಪಿನ್ ರಾವತ್

ರಕ್ಷಣಾ ಪಡೆಗಳ ಮುಖ್ಯಸ್ಥಭಾಗಿ

ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ (ಚೀಫ್ ಆಫ್ ಡೆಫೆನ್ಸ್ ಸ್ಟಾಫ್) ಜನರಲ್ ಬಿಪಿನ್ ರಾವತ್ ನೇಮಕವಾದ ನಂತರ ನಡೆದ ಮೊದಲ ಗಣರಾಜ್ಯೋತ್ಸವ ಸಮಾರಂಭ ಇದು. ಡಿ.31ರಂದು ರಾವತ್ ಅವರನ್ನು ಮುಖ್ಯಸ್ಥರನ್ನಾಗಿನೇಮಿಸಲಾಗಿತ್ತು. ರಕ್ಷಣಾ ಸಚಿವಾಲಯದ ಸೇವಾ ವ್ಯವಹಾರಗಳ ವಿಭಾಗದ ರಾವತ್ ಈಗ ಕೆಲಸ ಮಾಡುತ್ತಿದ್ದಾರೆ.ರಕ್ಷಣಾ ಪಡೆಯ ಮೂರೂ ವಿಭಾಗಗಳಿಗೆ (ನೌಕಾಪಡೆ, ವಾಯುಪಡೆ, ಭೂಸೇನೆ)ಸಂಬಂಧಿಸಿದ ಎಲ್ಲ ವಿಚಾರಗಳಲ್ಲಿಯೂರಕ್ಷಣಾ ಸಚಿವರಿಗೆಸಲಹೆಗಳನ್ನು ನೀಡುತ್ತಾರೆ.ರಕ್ಷಣಾ ಸಚಿವಾಲಯದ ರಕ್ಷಣೆ, ರಕ್ಷಣಾ ಉಪಕರಣಗಳ ಉತ್ಪಾದನೆ, ರಕ್ಷಣಾ ಸಂಶೋಧನೆ ಮತ್ತುಅಭಿವೃದ್ಧಿ, ನಿವೃತ್ತ ಸೈನಿಕರ ಯೋಗಕ್ಷೇಮ ವಿಭಾಗಗಳಿಗೂ ರಾವತ್‌ ಮುಖ್ಯಸ್ಥರಾಗಿದ್ದಾರೆ. ಭೂಸೇನೆ ಮುಖ್ಯಸ್ಥರಾದ ಜನರಲ್ ನರವಾಣೆ, ವಾಯುಪಡೆಯ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್ ಬಧೋರಿಯಾ ಮತ್ತು ನೌಕಾಪಡೆಯ ಮುಖ್ಯಸ್ಥರಾದ ಕರಮ್‌ಬೀರ್ ಸಿಂಗ್ ಅವರ ಜೊತೆಗೆ ಬಿಪಿನ್ ರಾವತ್ ಸಹ ಗಣರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದು ವಿಶೇಷ ವಿದ್ಯಮಾನ.

ರಾಷ್ಟ್ರಧ್ವಜದ ಮೇಲೆ ಪುಷ್ಪವೃಷ್ಟಿ

ಮೂರೂ ಸಶಸ್ತ್ರಪಡೆಗಳ ಹೆಲಿಕಾಪ್ಟರ್‌ಗಳ ಸಂಯೋಜಿತಹಾರಾಟ

ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಯುದ್ಧ ಹೆಲಿಕಾಪ್ಟರ್‌ಗಳು ಗಣರಾಜ್ಯೋತ್ಸವಪೆರೇಡ್‌ನಲ್ಲಿ ಸಂಯೋಜಿತ ಕಸರತ್ತು ತೋರಿದ್ದು ಈ ಬಾರಿಯ ಗಣರಾಜ್ಯೋತ್ಸವದಮತ್ತೊಂದು ಪ್ರಮುಖ ವಿದ್ಯಮಾನ. ದೇಶ ರಕ್ಷಣೆಯ ಜವಾಬ್ದಾರಿ ಹೊತ್ತ ಸಶಸ್ತ್ರಪಡೆಗಳ ನಡುವೆ ಹೊಂದಾಣಿಕೆ ಅತ್ಯಗತ್ಯ. ಮುಂದಿನ ದಿನಗಳಲ್ಲಿ ಭಾರತದ ಸಶಸ್ತ್ರಪಡೆಗಳು ಹೆಚ್ಚಿನ ಸಹಯೋಗದೊಂದಿಗೆ ಕಾರ್ಯನಿರ್ವಹಿಸಲಿವೆ ಎಂಬುದರ ಮುನ್ಸೂಚನೆಯಂತೆ ಸಶಸ್ತ್ರ ಪಡೆಗಳು ಮೂರೂ ವಿಭಾಗಕ್ಕೆ ಸೇರಿದ ಹೆಲಿಕಾಪ್ಟರ್‌ಗಳು 180 ಕಿ.ಮೀ. ವೇಗದಲ್ಲಿ ಸಂಯೋಜಿತಕಸರತ್ತು ತೋರಿದವು.

ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಎ–ಸ್ಯಾಟ್ ಕ್ಷಿಪಣಿ ಪ್ರದರ್ಶನ.

ಎ–ಸ್ಯಾಟ್ ಕ್ಷಿಪಣಿ ಪ್ರದರ್ಶನ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಇದೇ ಮೊದಲ ಬಾರಿಗೆ ಉಪಗ್ರಹನಾಶಕ ಕ್ಷಿಪಣಿ (ಎ–ಸ್ಯಾಟ್) ಪ್ರದರ್ಶಿಸಿತು. ಕಳೆದ ವರ್ಷ ಮಾರ್ಚ್‌ನಲ್ಲಿ 19 ಟನ್ ತೂಕದ ಎ–ಸ್ಯಾಟ್ ಕ್ಷಿಪಣಿಯನ್ನು ಪರೀಕ್ಷೆ ನಡೆಸಿದ್ದ ಡಿಆರ್‌ಡಿಒ,ಭೂಮಿಯಿಂದ 283 ಕಿ.ಮೀ. ಎತ್ತರದ ಕಕ್ಷೆಯಲ್ಲಿದ್ದ ಉಪಗ್ರಹವೊಂದನ್ನು ಹೊಡೆದುರುಳಿಸಿತ್ತು. ಈವರೆಗೆ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳಿಗೆ ಮಾತ್ರ ಸಾಧ್ಯವಿದ್ದ ಸಾಹಸವನ್ನು ಈ ಮೂಲಕ ಭಾರತ ತನಗೂ ಸಾಧ್ಯ ಎಂದುಜಗತ್ತಿನ ಎದುರು ಸಾರಿ ಹೇಳಿತ್ತು. ಡಿಆರ್‌ಡಿಒ ಅಭಿವೃದ್ಧಿಪಡಿಸಿರುವಈ ಕ್ಷಿಪಣಿಗೆ 1000 ಕಿ.ಮೀ. ದೂರದಲ್ಲಿರುವ ಉಪಗ್ರಹವನ್ನು ಹೊಡೆದುರುಳಿಸುವ ಶಕ್ತಿಯಿದೆ. ಆದರೆ ಪರೀಕ್ಷೆಯ ವೇಳೆ ಅಷ್ಟು ಎತ್ತರದ ಉಪಗ್ರಹವನ್ನು ಹೊಡೆದುರುಳಿಸಿದರೆ ಬಾಹ್ಯಾಕಾಶದಲ್ಲಿ ತ್ಯಾಜ್ಯಗಳು ಹರಡಿ ಇತರ ಉಪಗ್ರಹಗಳಿಗೆ ತೊಂದರೆಯಾಗುವ ಅಪಾಯ ಇತ್ತು. ಹೀಗಾಗಿಯೇ ಭಾರತವು ಕಡಿಮೆ ಎತ್ತರದ ಉಪಗ್ರಹವನ್ನು ಹೊಡೆದುರುಳಿಸಿ ತನ್ನ ಶಕ್ತಿ ಅನಾವರಣಗೊಳಿಸಿತ್ತು.

ಪ್ಯಾರಾಚೂಟ್ ರೆಜಿಮೆಂಟ್ ಯೋಧರಿಂದ ಕವಾಯತು.

‍ಪಥಸಂಚಲನದಲ್ಲಿ ಹೊಸ ತುಕಡಿ

ಇದೇ ಮೊದಲ ಬಾರಿಗೆ ‘ಕಾರ್ಪ್ಸ್‌ ಆಫ್ ಆರ್ಮಿ ಏರ್ ಡಿಫೆನ್ಸ್‌’ (ವಾಯುಪ್ರದೇಶ ರಕ್ಷಣಾ ತುಕಡಿ) ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪಾಲ್ಗೊಂಡಿತ್ತು. ಕ್ಯಾಪ್ಟನ್ ವಿಕಾಸ್ ಕುಮಾರ್ ಸಹು ಈ ತುಕಡಿಯನ್ನು ಮುನ್ನಡೆಸಿದ್ದರು. ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಕಾರ್ಪ್ಸ್‌ ಆಫ್ ಆರ್ಮಿಏರ್‌ ಡಿಫೆನ್ಸ್‌ಗೆ ‘ಪ್ರೆಸಿಡೆಂಟ್ಸ್‌ ಕಲರ್’ (ಸಶಸ್ತ್ರ ಪಡೆಯ ತುಕಡಿಗೆ ಸಲ್ಲುವ ಅತ್ಯುಚ್ಚ ಗೌರವ) ಪ್ರದಾನ ಮಾಡಿದ್ದರು. ‘ಆಗಸದಲ್ಲಿಯೇ ಶತ್ರುಗಳನ್ನು ನಾಶಪಡಿಸು’ (ಆಕಾಶೆ ಶತ್ರೂನ್ ಜಹಿ) ಘೋಷವಾಕ್ಯದ ಈ ತುಕಡಿಯ ಕಾರ್ಯನಿರ್ವಹಣೆ ಹಿರಿಯ ಸೇನಾಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು.

ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಪಾಲ್ಗೊಂಡ ಅಪಾಚೆ ಹೆಲಿಕಾಪ್ಟರ್‌ಗಳು

ಹೆಲಿಕಾಪ್ಟರ್‌ ದಾಳಿಗೆ ‘ಅಪಾಚೆ’ ಬಲ

ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಇದೇ ಮೊದಲು ಬಾರಿಗೆ ಅಮೆರಿಕ ನಿರ್ಮಾಣದ ಎಎಚ್‌–64ಇ ಅಪಾಚೆ ದಾಳಿ ಹೆಲಿಕಾಪ್ಟರ್‌ಗಳು ಹಾರಾಟ ನಡೆಸಿದವು. ಸೆಪ್ಟೆಂಬರ್ 2015ರಲ್ಲಿ ಭಾರತವು 22 ಅಪಾಚೆ ಹೆಲಿಕಾಪ್ಟರ್‌ಗಳಿಗಾಗಿ ಅಮೆರಿಕದ ಬೋಯಿಂಗ್‌ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಪಠಾಣ್‌ಕೋಟ್‌ ವಾಯುನೆಲೆಯಲ್ಲಿ ವಾಯುಪಡೆಯು ಈಗಾಗಲೇ ಎಂಟು ಅಪಾಚೆ ಹೆಲಿಕಾಪ್ಟರ್‌ಗಳನ್ನು ಸೇವೆಗೆ ನಿಯೋಜಿಸಿದೆ.

ಗಣರಾಜ್ಯೋತ್ಸವ ದಿನದಂದು ಹಾರಾಡಿದ ಚಿಕ್ನೂಕ್ ಹೆಲಿಕಾಪ್ಟರ್.

ಯುದ್ಧೋಪಕರಣಗಳ ಕ್ಷಿಪ್ರ ಸಾಗಣೆಗೆ ‘ಚಿಕ್ನೂಕ್’

ಯುದ್ಧೋಪಕರಣಗಳು ಮತ್ತು ಸೇನಾ ತುಕಡಿಗಳನ್ನು ಕ್ಷಿಪ್ರಗತಿಯಲ್ಲಿ ಯುದ್ಧಭೂಮಿಗೆ ನಿಯೋಜಿಸಲು (ಏರ್‌ಡ್ರಾಪ್ ಮಾಡಲು) ಉತ್ತಮ ಸಾಮರ್ಥ್ಯದ ಹೆಲಿಕಾಪ್ಟರ್‌ಗಳು ಬೇಕು ಎಂಬಬೇಡಿಕೆ ಬಹುಕಾಲದಿಂದ ಇತ್ತು. ಗಣರಾಜ್ಯೋತ್ಸವದಂದು ಪ್ರದರ್ಶನಗೊಂಡ ಮೂರು ಸಿಎಚ್‌–47 ಚಿಕ್ನೂಕ್ ಹೆವಿ ಲಿಫ್ಟ್‌ ಹೆಲಿಕಾಪ್ಟರ್‌ಗಳು ಈ ಬೇಡಿಕೆ ಈಡೇರಿರುವುದನ್ನು ಬಿಂಬಿಸಿದವು. 10 ಟನ್‌ ತೂಕ ಹೊರಬಲ್ಲಇಂಥ 15ಹೆಲಿಕಾಪ್ಟರ್‌ಗಳಖರೀದಿಗಾಗಿ ಅಮೆರಿಕದೊಂದಿಗೆಒಪ್ಪಂದ ಮಾಡಿಕೊಂಡಿತ್ತು.

ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಪ್ರದರ್ಶನಗೊಂಡ ಜಮ್ಮು ಮತ್ತು ಕಾಶ್ಮೀರದ ಟ್ಯಾಬ್ಲೂ

ಜಮ್ಮು ಮತ್ತು ಕಾಶ್ಮೀರದ ಟ್ಯಾಬ್ಲೂ

ಕಳೆದ ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿ, ರಾಜ್ಯವನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿತ್ತು. ಈ ಬೆಳವಣಿಗೆಯ ನಂತರ ನಡೆದ ಮೊದಲ ಗಣರಾಜ್ಯೋತ್ಸವದಲ್ಲಿ ಜಮ್ಮು ಮತ್ತು ಕಾಶ್ಮೀರ ಆಕರ್ಷಕ ಟ್ಯಾಬ್ಲೂ ಪ್ರದರ್ಶಿಸಿತು. ‘ಹಳ್ಳಿಗಳಿಗೆ ಹಿಂದಿರುಗಿ’ (ಬ್ಯಾಕ್‌ ಟು ವಿಲೇಜ್) ಎಂಬ ಆಶಯದ ಈ ಟ್ಯಾಬ್ಲೂ ವಿವಾದ, ಸಂಘರ್ಷದಿಂದ ಆಚೆಗಿನ ವಿಚಾರಗಳನ್ನು ಚರ್ಚೆಗೆ ಬರುವಂತೆ ಮಾಡಲು ಯತ್ನಿಸಿತು.ಮುಂದಿನ ದಿನಗಳಲ್ಲಿ ರಾಜ್ಯದ ಗ್ರಾಮೀಣ ಮತ್ತು ಒಳಪ್ರದೇಶಗಳಲ್ಲಿಯೂ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಲಿದೆ ಎಂಬುದನ್ನು ಈ ಟ್ಯಾಬ್ಲೂ ಬಿಂಬಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT