ನವದೆಹಲಿ:ಪಾಕಿಸ್ತಾನದ ಬಾಲಕೋಟ್ನಲ್ಲಿನ ಉಗ್ರರ ನೆಲೆಗಳ ಮೇಲಿನ ದಾಳಿಯ ನಂತರ ಭಾರತದ ಹಲವೆಡೆ ಕಟ್ಟೆಚ್ಚರ ವಹಿಸಲಾಗಿದೆ. ಭಾರತ–ಪಾಕಿಸ್ತಾನ ಗಡಿಗೆ ಸಮೀಪದಲ್ಲಿರುವ ನಗರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಜಮ್ಮು–ಕಾಶ್ಮೀರ, ಪಂಜಾಬ್, ಹರಿಯಾಣ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಭದ್ರತಾ ಸಿಬ್ಬಂದಿಯ ರಜೆಗಳನ್ನು ರದ್ದು ಮಾಡಲಾಗಿದೆ. ಭದ್ರತಾ ಸಂಸ್ಥೆಗಳ ಇತರೆ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರಿ ವೈದ್ಯರ ರಜೆಗಳನ್ನು ರದ್ದು ಮಾಡಿ, ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.
ಪಂಜಾಬ್ನಲ್ಲಿರುವ ಸೇನಾ ನೆಲೆ ಮತ್ತು ವಾಯುನೆಲೆಗಳ ಬಳಿ ಭದ್ರತೆ ಹೆಚ್ಚಿಸಲಾಗಿದೆ. ಮಹಾರಾಷ್ಟ್ರ ಕರಾವಳಿಯಲ್ಲಿ ಕರಾವಳಿ ಕಾವಲು ಪಡೆ ಗಸ್ತನ್ನು ಹೆಚ್ಚಿಸಿದೆ.
ದೇಶದ ಪ್ರಮುಖ ವಾಯುನೆಲೆಗಳಲ್ಲಿ ‘ವಾಯುದಾಳಿ ನಿರೋಧಕ ವ್ಯವಸ್ಥೆ’ಯನ್ನು ಸನ್ನಧುಗೊಳಿಸಲಾಗಿದೆ.
ವಾಯುನೆಲೆಗಳು ಸನ್ನಧ: ದೇಶದ ಪಶ್ಚಿಮ ಭಾಗದ ವಾಯುನೆಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪಾಕಿಸ್ತಾನದ ಕಡೆಯಿಂದ ಯಾವುದೇ ದಾಳಿ ನಡೆದರೂ, ಅದನ್ನು ತಡೆಯಲು ಮತ್ತು ಪ್ರತಿದಾಳಿ ನಡೆಸಲು ಈ ವಾಯುನೆಲೆಗಳು ಸನ್ನಧವಾಗಿವೆ.