ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹2.5 ಲಕ್ಷದಿಂದ ₹5 ಲಕ್ಷಕ್ಕೆ ಏರಿಕೆ: ವೇತನದಾರರ ತೆರಿಗೆ ಹೊರೆ ಇಳಿಕೆ

ಮೌಲ್ಯ ನಿರ್ಧಾರಿತ ಬಾಡಿಗೆ ಮೇಲಿನ ತೆರಿಗೆ ಕಡಿತ
Last Updated 2 ಜುಲೈ 2019, 16:44 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್‌ನಲ್ಲಿ ಮಧ್ಯಮವರ್ಗದ ತೆರಿಗೆ ಹೊರೆಯನ್ನು ತಗ್ಗಿಸಿದೆ. ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು ₹2.5 ಲಕ್ಷದಿಂದ ₹ 5 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಮುಂದಿನ ಹಣಕಾಸು ವರ್ಷದಿಂದ ಈ ಪ್ರಯೋಜನ ದೊರೆಯಲಿದೆ.

ಈ ನಿರ್ಧಾರದಿಂದ ದೇಶದಲ್ಲಿನಅಂದಾಜು 3 ಕೋಟಿಯಷ್ಟು ವೇತನ ವರ್ಗ, ಪಿಂಚಣಿದಾರರು, ಸ್ವ ಉದ್ಯೋಗ ನಡೆಸುತ್ತಿರುವವರು, ಸಣ್ಣ ಉದ್ದಿಮೆ ಹಾಗೂ ಸಣ್ಣ ವರ್ತಕರು, ಹಿರಿಯ ನಾಗರಿಕರಿಗೆ ಮುಂದಿನ ವರ್ಷಕ್ಕೆ₹ 18,500 ಕೋಟಿಗಳಷ್ಟು ತೆರಿಗೆ ಉಳಿತಾಯವಾಗಲಿದೆ ಎಂದು ಅಂದಾಜು ಮಾಡಲಾಗಿದೆ.

ತೆರಿಗೆ ಹಂತ ಮತ್ತು ಪ್ರಮಾಣದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ₹ 5 ಲಕ್ಷದಿಂದ ₹ 10 ಲಕ್ಷದವರೆಗಿನ ಆದಾಯಕ್ಕೆ ಶೇ 20ರಷ್ಟು, ₹ 10 ಲಕ್ಷಕ್ಕಿಂತ ಅಧಿಕ ವರಮಾನಕ್ಕೆ ಶೇ 30ರಷ್ಟು ತೆರಿಗೆಯೇ ಇರಲಿದೆ.

ಯಾವುದಕ್ಕೆಲ್ಲ ವಿನಾಯ್ತಿ:ಬ್ಯಾಂಕ್‌ ಮತ್ತು ಅಂಚೆ ಕಚೇರಿ ಠೇವಣಿಗಳ ಮೇಲೆ ಪಡೆಯುವ ಬಡ್ಡಿ ವರಮಾನಕ್ಕೆ ಇದ್ದ ತೆರಿಗೆ ವಿನಾಯ್ತಿ ಮೊತ್ತವನ್ನು ₹ 10 ಸಾವಿರದಿಂದ ₹ 40 ಸಾವಿರಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಸಣ್ಣ ಹೂಡಿಕೆದಾರರು ಮತ್ತು ಗೃಹಿಣಿಯರಿಗೆ ಅನುಕೂಲವಾಗಲಿದೆ.

ತೆರಿಗೆ ಪಾವತಿದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಮೌಲ್ಯ ನಿರ್ಧಾರಿತ ಬಾಡಿಗೆ ಮೇಲಿನ ತೆರಿಗೆ ಕಡಿತವನ್ನು ಈಗಿರುವ ₹ 1.80 ಲಕ್ಷದಿಂದ ₹ 2.40 ಲಕ್ಷಕ್ಕೆ ಹೆಚ್ಚಿಸಲುನಿರ್ಧರಿಸಲಾಗಿದೆ.

ಮಾರಾಟವಾಗದೇ ಉಳಿದಿರುವ ವಸತಿ ನಿವೇಶನಗಳಿಗೆ ಎರಡು ವರ್ಷಗಳವರೆಗೆ ತೆರಿಗೆ ವಿನಾಯ್ತಿಯನ್ನು ಪ್ರಸ್ತಾಪಿಸಲಾಗಿದೆ. ಸದ್ಯಕ್ಕೆ ಒಂದು ವರ್ಷದವರೆಗೆ ವಿನಾಯ್ತಿ ಇದೆ.

2020ರ ಮಾರ್ಚ್‌ 31ರವರೆಗೆ ಗೃಹ ಯೋಜನೆಗೆ ಒಪ್ಪಿಗೆ ಪಡೆದಿದ್ದರೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80–ಐಬಿಎ ಅಡಿ ತೆರಿಗೆ ಪ್ರಯೋಜನ ಸಿಗಲಿದೆ.

**

ಆದಾಯ ತೆರಿಗೆ ಗೊಂದಲ ಬೇಡ

‘ಆದಾಯ ತೆರಿಗೆ ಬಗ್ಗೆ ಸಾಕಷ್ಟು ಜನರಿಗೆ ಗೊಂದಲ ಉಂಟಾಗಿದೆ. ಇಲ್ಲಿ ಒಂದು ಮಾತು ನೆನಪಿನಲ್ಲಿಡಿ. ಬಜೆಟ್‌ನಲ್ಲಿ ತೆರಿಗೆ ವಿನಾಯ್ತಿ ನೀಡಲಾಗಿದೆಯೇ ಹೊರತು ತೆರಿಗೆ ಮಿತಿಗಳನ್ನು ಬದಲಾಯಿಸಿಲ್ಲ. ಇದರಂತೆ ₹ 5 ಲಕ್ಷ ವರೆಗಿನ ನಿವ್ವಳ ಆದಾಯ ಹೊಂದಿರುವವರು ಯಾವುದೇ ತೆರಿಗೆ ಪಾವತಿಸಬೇಕಿಲ್ಲ. ₹ 5 ಲಕ್ಷಕ್ಕಿಂತ ಹೆಚ್ಚು ನಿವ್ವಳ ಆದಾಯ ಹೊಂದಿದ್ದರೆ ತೆರಿಗೆ ಪಾವತಿಸಬೇಕಾಗುತ್ತದೆ. ₹ 5 ಲಕ್ಷದ ವರೆಗಿನ ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯ್ತಿ ನೀಡುವುದರಿಂದ ₹ 12,500 ತೆರಿಗೆ ಉಳಿತಾಯವಾಗಲಿದೆ.

₹ 5 ಲಕ್ಷದ ವರೆಗಿನ ಆದಾಯದ ಜತೆಗೆ ₹ 50 ಸಾವಿರದ ಸ್ಟ್ಯಾಂಡರ್ಡ್ ಡಿಡಕ್ಷನ್, ಸೆಕ್ಷನ್ 80 ಸಿ ಅಡಿಯಲ್ಲಿ ₹ 1.5 ಲಕ್ಷ, 80 ಡಿ ಅಡಿಯಲ್ಲಿ ಆರೋಗ್ಯ ವಿಮೆಯ ಲಾಭ, ಸೆಕ್ಷನ್ 80 ಸಿಸಿಡಿ ( 1 ಬಿ) ಅಡಿಯಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ ಅಡಿಯಲ್ಲಿ ₹ 50 ಸಾವಿರ ವಿನಾಯ್ತಿ, ಗೃಹ ಸಾಲದ ಬಡ್ಡಿ ಮೇಲೆ ವಿನಾಯ್ತಿ ಸಿಗಲಿದೆ. ₹ 5 ಲಕ್ಷ ಮೇಲ್ಪಟ್ಟು ಆದಾಯ ಇರುವವರಿಗೆ ಈ ಹಿಂದೆ ಇದ್ದ ತೆರಿಗೆ ಮಿತಿಗಳು ಮುಂದುವರಿಯಲಿದೆ.

**

ಬಾಡಿಗೆ ಮನೆಗೆ ವಿನಾಯ್ತಿ

ಒಂದಕ್ಕಿಂತ ಹೆಚ್ಚು ಮನೆಗಳಲ್ಲಿ ವಾಸವಿದ್ದರೆ, ಅಂದರೆ ಕುಟುಂಬ ಒಂದು ಕಡೆ ನೆಲೆಸಿದ್ದು, ಯಜಮಾನ ಕೆಲಸಕ್ಕಾಗಿ ಬೇರೆ ಕಡೆ ಮನೆ ಮಾಡಿದ್ದರೆ ಎರಡೂ ಮನೆಗೂ ಬಾಡಿಗೆ ಮೇಲಿನ ತೆರಿಗೆಯಿಂದ ವಿನಾಯ್ತಿ ಸಿಗಲಿದೆ.

ಸ್ಥಿರಾಸ್ತಿ ಮಾರಾಟದಿಂದ ಬರುವ ₹ 2 ಕೋಟಿ ಬಂಡವಾಳ ಗಳಿಕೆಯನ್ನು ಎರಡು ಮನೆಗಳ ಖರೀದಿಗೆ ಹೂಡಿಕೆ ಮಾಡಬಹುದು. ಒಬ್ಬ ವ್ಯಕ್ತಿ ತನ್ನ ಜೀವಮಾನದಲ್ಲಿ ಒಂದು ಬಾರಿಗೆ ಮಾತ್ರ ಇದರ ಪ್ರಯೋಜನ ಪಡೆದುಕೊಳ್ಳಬಹುದು.

ಎಂಎಸ್ಎಂಇಗೆ 7 ಸಾವಿರ ಕೋಟಿ

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ₹7,011 ಕೋಟಿ ಹಣ ನೀಡಲಾಗಿದೆ. ಇದು ಈವರೆಗಿನ ಅತಿ ಹೆಚ್ಚು ಅನುದಾನವಾಗಿದೆ. ಈ ಹಿಂದಿನ ಯಾವುದೇ ಬಜೆಟ್‌ಗಳಲ್ಲಿ ಇಷ್ಟೊಂದು ಹಣವನ್ನು ನೀಡಿರಲಿಲ್ಲ.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಹೂಡಿಕೆಯ ಉದ್ದಿಮೆಗಳಿಗೆ ಈ ಹಣ ನೀಡಲಾಗಿದೆ. ಇದರಿಂದ ದೇಶದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಬಹುದಾಗಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ.

ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಗೆ (ಪಿಎಂಇಜಿಪಿ) ₹2,327 ಕೋಟಿ ನೀಡಲಾಗಿದೆ.

ಪಿಎಂಇಜಿಪಿಯಿಂದ ಸುಸ್ಥಿರ ಉದ್ಯೋಗಾವಕಾಶ ಲಭ್ಯವಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಎಂಎಸ್‌ಎಂಇಗಳಿಗೆ ಹಣಕಾಸು ಖಾತ್ರಿಗಾಗಿ ಹಣಕಾಸು ಬೆಂಬಲ ಯೋಜನೆಯಡಿ ₹597 ಕೋಟಿ ನೀಡಲಾಗಿದೆ.

₹ 34.17 ಲಕ್ಷ ಕೋಟಿಗೆ ಲೇಖಾನುದಾನ

ಮುಂದಿನ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳ ಕಾಲ ವೆಚ್ಚ ಮಾಡಲು ಕೇಂದ್ರ ಸರ್ಕಾರ ₹ 34.17 ಲಕ್ಷ ಕೋಟಿಗಳ ಲೇಖಾನುದಾನಕ್ಕೆ ಸಂಸತ್ತಿನ ಒಪ್ಪಿಗೆ ಕೇಳಿದೆ.

2019–20ನೆ ಹಣಕಾಸು ವರ್ಷಕ್ಕೆ ಒಟ್ಟು ₹ 97.43 ಲಕ್ಷ ಕೋಟಿ ವೆಚ್ಚ ತಗುಲಿದೆ ಎಂದು ಮಧ್ಯಂತರ ಬಜೆಟ್‌ನಲ್ಲಿ ಅಂದಾಜಿಸಲಾಗಿದೆ.

ನಿಗದಿತ ಅವಧಿಗೆ ವೆಚ್ಚ ಮಾಡಲು ಮುಂಚಿತವಾಗಿಯೇ ಸಂಸತ್ತು ಅನುಮೋದನೆ ನೀಡುವುದಕ್ಕೆ ಲೇಖಾನುದಾನ ಎನ್ನುತ್ತಾರೆ.

ಲೇಖಾನುದಾನ ಕೋರಿದ ₹ 34.17 ಲಕ್ಷ ಕೋಟಿಯಲ್ಲಿ ₹ 65,366 ಕೋಟಿಗಳನ್ನು ಆಹಾರ ಮತ್ತು ಪಡಿತರ ವಿತರಣೆಗೆ ನಿಗದಿಪಡಿಸಲಾಗಿದೆ. ಗ್ರಾಮೀಣಾಭಿವೃದ್ಧಿಗೆ ₹ 20 ಸಾವಿರ ಕೋಟಿ ಮತ್ತು ರಕ್ಷಣಾ ಸೇವೆಗಳಿಗೆ ₹ 37,423 ಕೋಟಿ ನೀಡಲು ಕೋರಲಾಗಿದೆ.

3 ಬ್ಯಾಂಕ್‌ಗಳ ನಿರ್ಬಂಧ ಸಡಿಲ

ಬಂಡವಾಳ ನೆರವು ನೀಡುವು ಕುರಿತು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ವಿಧಿಸಿದ್ದ ಕಠಿಣ ಸ್ವರೂಪದ ನಿರ್ಬಂಧಿತ ಕ್ರಮಗಳಿಂದ (ಪಿಸಿಎ) ಮೂರು ಬ್ಯಾಂಕ್‌ಗಳನ್ನು ಕೈಬಿಡಲಾಗಿದೆ.

‘ಒಟ್ಟಾರೆ 11 ಬ್ಯಾಂಕ್‌ಗಳ ವಿರುದ್ಧ ಪಿಸಿಎ ವಿಧಿಸಲಾಗಿತ್ತು. ಅವುಗಳಲ್ಲಿ ಬ್ಯಾಂಕ್‌ ಆಫ್ ಇಂಡಿಯಾ, ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಮತ್ತು ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ ಮೇಲಿದ್ದ ನಿರ್ಬಂಧಗಳನ್ನು ಆರ್‌ಬಿಐಕೈಬಿಟ್ಟಿದೆ’ ಎಂದು ಗೋಯಲ್ ತಿಳಿಸಿದ್ದಾರೆ.

‘ಇನ್ನುಳಿದ 8 ಬ್ಯಾಂಕ್‌ಗಳು ಶೀಘ್ರವೇ ನಿರ್ಬಂಧದಿಂದ ಹೊರಬರುವ ವಿಶ್ವಾಸವಿದೆ’ ಎಂದಿದ್ದಾರೆ.

5 ವರ್ಷದಲ್ಲಿ ₹ 16.96 ಲಕ್ಷ ಕೋಟಿ ಎಫ್‌ಡಿಐ

ಐದು ವರ್ಷದಲ್ಲಿ ₹ 16.96 ಲಕ್ಷ ಕೋಟಿಯಷ್ಟು ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹರಿದುಬಂದಿದೆ.

ಸೇವೇಗಳು, ಕಂಪ್ಯೂಟರ್‌ ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್‌, ದೂರಸಂಪರ್ಕ, ವ್ಯಾಪಾರ, ನಿರ್ಮಾಣ, ವಾಹನ ಮತ್ತು ವಿದ್ಯುತ್‌ ವಲಯಗಳು ಅತಿ ಹೆಚ್ಚಿನ ಎಫ್‌ಡಿಐ ಆಕರ್ಷಿಸಿವೆ.ಮಾರಿಷಸ್‌, ಸಿಂಗಪುರ, ನೆದರ್ಲೆಂಡ್ಸ್‌, ಅಮೆರಿಕ ಮತ್ತು ಜಪಾನ್‌ ಎಫ್‌ಡಿಐನ ಪ್ರಮುಖ ಮೂಲಗಳಾಗಿವೆ.

ಗುರಿ ತಲುಪದ ಜಿಎಸ್‌ಟಿ ಸಂಗ್ರಹ

ಪ್ರಸಕ್ತ ಹಣಕಾಸು ವರ್ಷದಲ್ಲಿ ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್‌ಟಿ) ₹ 7.43 ಲಕ್ಷ ಕೋಟಿ ಸಂಗ್ರಹಿಸುವುದಾಗಿ ಬಜೆಟ್‌ನಲ್ಲಿ ಅಂದಾಜಿಸಲಾಗಿತ್ತು.ಆದರೆ, ಪರಿಷ್ಕೃತ ಅಂದಾಜಿನಲ್ಲಿ₹ 6.43 ಲಕ್ಷ ಕೋಟಿಗೆ ತಗ್ಗಿಸಲಾಗಿದೆ.

10 ತಿಂಗಳಿನಲ್ಲಿ (ಏಪ್ರಿಲ್‌–ಜನವರಿ) ಕೇಂದ್ರ ಮತ್ತು ರಾಜ್ಯಗಳ ಜಿಎಸ್‌ಟಿ ಸಂಗ್ರಹ ₹ 9.71 ಲಕ್ಷ ಕೋಟಿಯಷ್ಟಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ತಿಂಗಳ ಸರಾಸರಿ ಜಿಎಸ್‌ಟಿ ಸಂಗ್ರಹ ₹ 89,700 ಕೋಟಿಯಿಂದ ₹ 97,100 ಕೋಟಿಗೆ ಏರಿಕೆಯಾಗಿದೆ.

ವಿನಾಯ್ತಿ ಮತ್ತು ಕಡಿತದ ಹೊರತಾಗಿಯೂ ವರಮಾನ ಸಂಗ್ರಹ ಉತ್ತೇಜನಕಾರಿಯಾಗಿದೆ ಎಂದು ಗೋಯಲ್‌ ತಿಳಿಸಿದ್ದಾರೆ.

2019–20ನೇ ಹಣಕಾಸು ವರ್ಷದಲ್ಲಿ ಜಿಎಸ್‌ಟಿಯಿಂದ ₹ 7.61 ಕೋಟಿ ಸಂಗ್ರಹಿಸುವ ಅಂದಾಜು ಮಾಡಲಾಗಿದೆ.

ಬಡವರು ಮತ್ತು ಮಧ್ಯಮ ವರ್ಗ ಬಳಸುತ್ತಿರುವಬಹುತೇಕ ಅಗತ್ಯ ವಸ್ತುಗಳಲ್ಲಿ ಕೆಲವು ಶೂನ್ಯ ತೆರಿಗೆಯಲ್ಲಿದ್ದರೆ, ಇನ್ನೂ ಕೆಲವು ಶೇ 5 ರ ತೆರಿಗೆಯಲ್ಲಿವೆ.

**

ಬಜೆಟ್‌–2019: ಪ್ರತಿಕ್ರಿಯೆ

ದೇಶದ ಯುವಜನರು, ರೈತರು ಹಾಗೂ ಬಡವರ ಆಕಾಂಕ್ಷೆಗಳನ್ನು ಈಡೇರಿಸುವ ಮೋದಿ ಸರ್ಕಾರದ ಬದ್ಧತೆಯನ್ನು ಇದು ಪುನರುಚ್ಚರಿಸುತ್ತದೆ.

–ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

**

ನೋಟು ರದ್ದು, ಕಪ್ಪು ಹಣ ತಡೆಯಿಂದ ಈವರೆಗೆ ₹1.30 ಲಕ್ಷ ಕೋಟಿ ಅಘೋಷಿತ ಆಸ್ತಿ ಪತ್ತೆಯಾಗಿದೆ. ಅಲ್ಲದೆ ₹50 ಸಾವಿರ ಕೋಟಿ ವಶಕ್ಕೆ ಪಡೆಯಲಾಗಿದೆ.

–ಪಿಯೂಷ್ ಗೋಯಲ್, ಹಣಕಾಸು ಸಚಿವ

**

ಕೇಂದ್ರ ಬಜೆಟ್ ಬಿಜೆಪಿ ಪ್ರಣಾಳಿಕೆ ಇದ್ದಂತಿದೆ. ಲೋಕಸಭಾ ಚುನಾವಣೆ ಹತ್ತಿರದಲ್ಲಿರುವಾಗ ಮತದಾರರಿಗೆ ಲಂಚ ನೀಡಲು ಬಿಜೆಪಿ ಈ ಮೂಲಕ ಯತ್ನಿಸಿದೆ. ಇವು ಕೇವಲ ಹುಸಿ ಭರವಸೆಗಳು.

–ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ

**

ಇದು ಐತಿಹಾಸಿಕ ಬಜೆಟ್. ದೇಶದ ಆರ್ಥಿಕತೆಯನ್ನು ಬಲಿಷ್ಠಗೊಳಿಸಲು ಸರ್ಕಾರ ಬಯಸಿದ್ದು, ಇದು ಬಜೆಟ್‌ನ ಧ್ಯೇಯವಾಗಿದೆ.

–ರಾಜನಾಥ ಸಿಂಗ್, ಕೇಂದ್ರ ಗೃಹ ಸಚಿವ

**

ಲೋಕಸಭಾ ಚುನಾವಣೆ ದೃಷ್ಟಿಯಿಂದ ಮಂಡಿಸಿರುವ ಬಜೆಟ್ ಇದು. ಆರ್ಥಿಕತೆಯನ್ನು ಸರಿದೂಗಿಸುವಲ್ಲಿ ಆಗಿರುವ ಭಾರಿ ವೈಫಲ್ಯವನ್ನು ಮರೆಮಾಚುವ ಯತ್ನ ಇಲ್ಲಿದೆ.

–ಡಿ. ರಾಜಾ, ಸಿಪಿಐ ಮುಖಂಡ

**

ಮಧ್ಯಮವರ್ಗಕ್ಕೆ ತೆರಿಗೆ ಮಿತಿ ಏರಿಸಿರುವುದನ್ನು ಸ್ವಾಗತಿಸುತ್ತೇನೆ. ತಿಂಗಳಿಗೆ 500 ರೂಪಾಯಿಯಲ್ಲಿ ರೈತರು ಗೌರವಯುತ ಜೀವನ ನಿರ್ವಹಿಸಲು ಸಾಧ್ಯವೇ?

–ಶಶಿ ತರೂರ್, ಕಾಂಗ್ರೆಸ್ ಮುಖಂಡ

**

ಕೃಷಿ ಕ್ಷೇತ್ರದ ಮೇಲೆ ಹೆಚ್ಚಿನ ಗಮನ ಹರಿಸಿರುವುದು ಸ್ವಾಗತಾರ್ಹ. ಮಾರುಕಟ್ಟೆ ಸಂಪರ್ಕ, ಉಗ್ರಾಣ, ಕೃಷಿ ಉತ್ಪನ್ನ ಸಂಕ್ಷರಣೆಗೆ ಒತ್ತು ಒಳ್ಳೆಯ ಕ್ರಮ.

–ಎಚ್.ಕೆ. ಭನ್ವಾಲಾ, ನಬಾರ್ಡ್ ಮುಖ್ಯಸ್ಥ

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT