ಬೆಂಗಳೂರು: ತೇಜಸ್ ಯಶಸ್ಸಿನ ನಂತರ ಐದನೇ ತಲೆಮಾರಿನ ಸುಧಾರಿತ ಮಧ್ಯಮ ಶ್ರೇಣಿಯ ಯುದ್ಧ ವಿಮಾನಗಳ (ಎಎಂಸಿಎ) ತಯಾರಿಕೆಗೆ ಭಾರತ ಮುಂದಾಗಿದೆ.
ನಗರದ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಅವರು ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ಕಾರ್ಯಕ್ರಮದಲ್ಲಿ ಡಿಆರ್ಡಿಒ ಅಧ್ಯಕ್ಷ ಡಾ.ಜಿ.ಸತೀಶ್ ರೆಡ್ಡಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
ಸುಧಾರಿತ ಮಧ್ಯಮ ಶ್ರೇಣಿಯ ಯುದ್ಧ ವಿಮಾನಗಳ (ಎಎಂಸಿಎ) ವಿನ್ಯಾಸ ಮತ್ತು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅಲ್ಲದೆ, ತೇಜಸ್ ಮಾರ್ಕ್–2 ಯುದ್ಧ ವಿಮಾನ ಅಭಿವೃದ್ಧಿ ಚಟುವಟಿಕೆಯನ್ನು ಈಗಾಗಲೇ ಆರಂಭಿಸಲಾಗಿದೆ. ಆದಷ್ಟು ಶೀಘ್ರವೇ ಮೊದಲ ವಿಮಾನ ಹೊರಬರಲಿದೆಎಂದರು.
ಸುಧಾರಿತ ಮಧ್ಯಮ ಶ್ರೇಣಿಯ ಯುದ್ಧ ವಿಮಾನಗಳ (ಎಎಂಸಿಎ) ವಿನ್ಯಾಸ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಚಾಲನೆ ನೀಡಲಾಗಿದೆ. ವಿನ್ಯಾಸಕ್ಕೆ ಈಗಾಗಲೇ ಹಣಕಾಸು ಬದಗಿಸಲಾಗಿದೆ. ಈ ವಿಮಾನಗಳನ್ನು ಭಾರತೀಯ ವಾಯುಪಡೆಗಾಗಿ ನಿರ್ಮಿಸಲಾಗುತ್ತಿದೆ. ಎಚ್ಎಎಲ್ ಮತ್ತು ಎಡಿಎ ಸೇರಿ ಯೋಜನೆ ಪೂರ್ಣಗೊಳಿಸಲಿವೆ ಎಂದು ಸತೀಶ್ ರೆಡ್ಡಿ ಹೇಳಿದರು.
‘ಎಲ್ಸಿಎ ಮಾರ್ಕ್–1 ಕ್ಕೆ ಫೆಬ್ರುವರಿ ತಿಂಗಳಲ್ಲಿ ಕಾರ್ಯಾಚರಣೆಯ ಅಂತಿಮ ಹಸಿರು ನಿಶಾನೆ ನೀಡಲಾಗಿದೆ. 83 ಎಲ್ಸಿಎಗಳ ಉತ್ಪಾದನೆ ಒಪ್ಪಂದ ಆಗಿದೆ. ವಿದೇಶಗಳಿಗೆ ಮಾರಾಟದ ಮಾತುಕತೆ ಶೀಘ್ರವೇ ಪೂರ್ಣಗೊಳ್ಳಲಿದೆ’ ಎಂದರು.
ತೇಜಸ್’ಗೆ ವಿದೇಶಗಳಿಂದ ಬೇಡಿಕೆ: ‘ತೇಜಸ್ ಯುದ್ಧ ವಿಮಾನಗಳಿಗೆ ಆಗ್ನೇಯ ಏಷ್ಯಾದ ದೇಶಗಳಿಂದ ಬೇಡಿಕೆ ಬಂದಿದೆ. ಯುದ್ಧ ವಿಮಾನಗಳನ್ನು ವಿದೇಶಗಳಿಗೆ ರಫ್ತು ಮಾಡುವ ಹಂತಕ್ಕೆ ನಾವು ತಲುಪಿದ್ದೇವೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.
‘ದೇಶಿ ನಿರ್ಮಿತ ಹಗುರ ಯುದ್ಧ ವಿಮಾನದ ಹಾರಾಟ ನಡೆಸಿದಾಗ ಅದ್ಭುತ ಮತ್ತು ಆಹ್ಲಾದಕರ ಅನುಭವ ನೀಡಿತು. ಬಹು ಕಾರ್ಯ ನಿರ್ವಹಣೆಯ ಈ ವಿಮಾನ ಹಲವು ಸಂಕೀರ್ಣ ಸಾಮರ್ಥ್ಯವನ್ನು ಹೊಂದಿದೆ. ಇದರ ಅರ್ಥ ಭಾರತದ ವೈಮಾನಿಕ ಸಾಮರ್ಥ್ಯವನ್ನು ಇದು ಹೆಚ್ಚಿಸಿರುವುದು ನನ್ನ ಗಮನಕ್ಕೆ ಬಂದಿತು’ ಎಂದರು.