ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಅಭ್ಯುದಯಕ್ಕೆ ಪೂರಕ ವಾತಾವರಣವಿಲ್ಲ:

ಜಾಗತಿಕ ಸೂಚ್ಯಂಕದಲ್ಲಿ ಭಾರತಕ್ಕೆ 131ನೇ ಸ್ಥಾನ: ವಿಶ್ವಸಂಸ್ಥೆ ಪ್ರಾಯೋಜಿತ ಅಧ್ಯಯನ ವರದಿ
Last Updated 20 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ (ಪಿಟಿಐ): ಜಾಗತಿಕ ಸುಸ್ಥಿರ ಸೂಚ್ಯಂಕದಲ್ಲಿ ಭಾರತವು 77ನೇ ಸ್ಥಾನ ಪಡೆದಿದೆ. ಮಕ್ಕಳ ಅಭ್ಯುದಯ ಸೂಚ್ಯಂಕದಲ್ಲಿ 131ನೇ ಸ್ಥಾನ ಪಡೆದಿದೆ. ವಿಶ್ವಸಂಸ್ಥೆ ಪ್ರಾಯೋಜಿತ ಅಧ್ಯಯನ ವರದಿಯಲ್ಲಿ ಈ ಮಾಹಿತಿ ಇದೆ.

ವಿಶ್ವ ಆರೋಗ್ಯ ಸಂಸ್ಥೆ, ವಿಶ್ವಸಂಸ್ಥೆಯ ಮಕ್ಕಳ ನಿಧಿ ಮತ್ತು ಲಾನ್ಸೆಟ್ ವೈದ್ಯಕೀಯ ನಿಯತಕಾಲಿಕ ನಡೆಸಿದ ಅಧ್ಯಯನದ ವರದಿಯಲ್ಲಿ ಈ ಮಾಹಿತಿ ಇದೆ. ವಿಶ್ವದ 180 ದೇಶಗಳಲ್ಲಿ ಮಕ್ಕಳ ಬೆಳವಣಿಗೆಗೆ ಪೂರಕವಾದ ವಾತಾವರಣ ಇದೆಯೇ ಎಂಬುದರ ಅಧಾರದಲ್ಲಿ ಸ್ಥಾನವನ್ನು ನಿಗದಿ ಮಾಡಲಾಗುತ್ತದೆ. ಎರಡೂ ಸೂಚಿಗಳಲ್ಲಿ ಭಾರತವು ಕಡಿಮೆ ಅಂಕಗಳನ್ನು ಪಡೆದ ಕಾರಣ, 77 ಮತ್ತು 131ನೇ ಸ್ಥಾನ ಪಡೆದುಕೊಂಡಿದೆ.

2030ರ ಅಂತ್ಯದ ವೇಳೆಗೆ ಪ್ರತಿ ದೇಶವು ಹೊರಸೂಸಬಹುದಾದ ಇಂಗಾಲದ ಡೈ ಆಕ್ಸೈಡ್‌ನ ಪ್ರಮಾಣಕ್ಕೆ ಮಿತಿ ನಿಗದಿ ಮಾಡಲಾಗಿದೆ. ಈ ಗುರಿಯನ್ನು ಮುಟ್ಟಬೇಕೆಂದರೆ, ಎಲ್ಲಾ ದೇಶಗಳು ಪ್ರತಿ ವರ್ಷ ಇಂಗಾಲದ ಡೈ ಆಕ್ಸೈಡ್ ಮಾಲಿನ್ಯದ ಪ್ರಮಾಣವನ್ನು ಇಳಿಕೆ ಮಾಡಿಕೊಳ್ಳಬೇಕು. ಈ ವಾರ್ಷಿಕ ಗುರಿಯನ್ನು ಪೂರೈಸದೇ ಇರುವ ಕಾರಣ ಭಾರತವು ಸುಸ್ಥಿರ ಸೂಚ್ಯಂಕದಲ್ಲಿ 77ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.

ಇಂಗಾಲದ ಡೈ ಆಕ್ಸೈಡ್‌ ಮಾಲಿನ್ಯದ ಪ್ರಮಾಣವನ್ನು ಕಡಿಮೆ ಮಾಡದೇ ಇದ್ದರೆ, ಅದು ಮಕ್ಕಳ ಭವಿಷ್ಯಕ್ಕೆ ಮಾರಕವಾಗಲಿದೆ. ಭಾರತ ಮಾತ್ರವಲ್ಲ, ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳೂ ಈ ಗುರಿಯನ್ನು ಮುಟ್ಟಲು ವಿಫಲವಾಗಿವೆ ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಮಕ್ಕಳ ಅಭ್ಯುದಯ ಸೂಚ್ಯಂಕವನ್ನು ಜನನ, ಐದು ವರ್ಷದ ಒಳಗಿನ ಮಕ್ಕಳ ಉಳಿಯುವಿಕೆ, ಹೆರಿಗೆ ಮತ್ತು ಮಕ್ಕಳ ವೈದ್ಯಕೀಯ ಸವಲತ್ತು, ಸ್ವಚ್ಛತೆ, ಶಿಕ್ಷಣ, ಪೌಷ್ಟಿಕಾಂಶ ಪೂರೈಕೆ ಮತ್ತು ಹಿಂಸಾಚಾರ ಇಲ್ಲದ ವಾತಾವರಣದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಭಾರತದ ಸಾಧನೆ ಕಳಪೆಯಾಗಿದೆ. ಹೀಗಾಗಿ ಭಾರತದಲ್ಲಿ ಮಕ್ಕಳ ಅಭ್ಯುದಯಕ್ಕೆ ಪೂರಕವಾದ ವಾತಾವರಣ ಇಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಈಚಿನ ದಶಕಗಳಲ್ಲಿ ಮಕ್ಕಳನ್ನು ಗ್ರಾಹಕರಾಗಿ ಪರಿಗಣಿಸುವ ಪ್ರವೃತ್ತಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಜಗತ್ತಿನಲ್ಲಿ ಒಂದು ಮಗು ವರ್ಷವೊಂದರಲ್ಲಿ, ಟಿ.ವಿ.ಯಲ್ಲಿ 30,000 ಜಾಹೀರಾತುಗಳನ್ನು ನೋಡುತ್ತದೆ. ಬಹುತೇಕ ಜಾಹೀರಾತುಗಳು ‘ಜಂಕ್‌ ಫುಡ್‌’ ಬಳಕೆಯನ್ನು ಉತ್ತೇಜಿಸುತ್ತವೆ. ಇವುಗಳ ಬಳಕೆಯಿಂದ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಎದುರಾಗುತ್ತದೆ. ಬಹುತೇಕ ಎಲ್ಲಾ ದೇಶಗಳಲ್ಲೂ ಈ ಪ್ರವೃತ್ತಿ ಇದೆ ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಇವೆಲ್ಲವನ್ನೂ ತಡೆಯುವ ಉದ್ದೇಶದಿಂದ ಎಲ್ಲಾ ಕ್ಷೇತ್ರಗಳಲ್ಲಿ ನೀತಿ ಬದಲಾಗಬೇಕಿದೆ. ಮಕ್ಕಳ ಹಕ್ಕುಗಳ ರಕ್ಷಣೆಗೆ ಎಲ್ಲಾ ದೇಶಗಳು ಕ್ರಮ ತೆಗೆದುಕೊಳ್ಳಬೇಕಿದೆ ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT