ನವದೆಹಲಿ: ಗಡಿಯಲ್ಲಿ ಸೇನೆ ಹಿಂದಕ್ಕೆ ಕರೆಸಿಕೊಳ್ಳುವುದು ಹಾಗೂ ಗಾಲ್ವನ್ ಕಣಿವೆಯಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸುವ ವಿಷಯ ಕುರಿತಂತೆ ಭಾರತ ಹಾಗೂ ಚೀನಾದ ಮೇಜರ್ ಜನರಲ್ ಹುದ್ದೆಯ ಅಧಿಕಾರಿಗಳ ನಡುವೆ ಮೂರನೇ ದಿನವೂ ಮಾತುಕತೆ ನಡೆಯಿತು.
ಗಾಲ್ವನ್ ಕಣಿವೆಯಲ್ಲಿ ಚೀನಾ ಯೋಧರ ಜತೆ ಸೋಮವಾರ ಸಂಜೆ ನಡೆದ ಘರ್ಷಣೆಯಲ್ಲಿ ಭಾರತದ ಕರ್ನಲ್ ಸೇರಿ 20 ಯೋಧರು ಮೃತಪಟ್ಟು, 18 ಯೋಧರು ಗಾಯಗೊಂಡಿದ್ದರು.
ಘರ್ಷಣೆ ವಿವಾದ ಬಗೆಹರಿಸಿಕೊಳ್ಳುವ ಸಂಬಂಧ ಎರಡೂ ದೇಶಗಳ ನಡುವೆ ಮಂಗಳವಾರ ಹಾಗೂ ಬುಧವಾರ ನಡೆದ ಮಾತುಕತೆಗಳು ಪೂರ್ಣಗೊಂಡಿರಲಿಲ್ಲ ಎಂದು ಮೂಲಗಳು ತಿಳಿಸಿದ್ದವು.ಗಡಿಯಲ್ಲಿ ಉಭಯ ದೇಶಗಳ ಸೇನೆ ಹಿಂತೆಗೆಯಲು ಜೂನ್ 6ರಂದು ನಿರ್ಣಯಕೈಗೊಳ್ಳಲಾಗಿತ್ತು. ಇದನ್ನು ಜಾರಿ ಮಾಡಲು ಬುಧವಾರ ನಡೆದ ಸಭೆಯಲ್ಲಿ ಚರ್ಚೆ ನಡೆದಿತ್ತು.
ಚೀನಾಕ್ಕೆ ಪ್ರಬಲ ಸಂದೇಶ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ‘ಭಾರತಕ್ಕೆ ಶಾಂತಿ ಅಗತ್ಯ. ಆದರೆ ಪ್ರಚೋದಿಸಿದರೆ ತಕ್ಕ ತಿರುಗೇಟು ನೀಡಲು ಭಾರತ ಸಮರ್ಥವಾಗಿದೆ’ ಎಂದು ಹೇಳಿದ್ದರು.
ನ್ಯಾಯಯುತವಾಗಿ ಇತ್ಯರ್ಥ: ಚೀನಾ (ಬೀಜಿಂಗ್ ವರದಿ)
ಗಾಲ್ವನ್ ಕಣಿವೆಯಲ್ಲಿ ಭಾರತ–ಚೀನಾ ನಡುವೆ ಉಂಟಾಗಿರುವ ಸಂಘರ್ಷ ಗಂಭೀರ ಸ್ವರೂಪದ್ದಾಗಿದ್ದು, ಅದನ್ನು ನ್ಯಾಯಯುತ ಮಾರ್ಗದಲ್ಲಿ ಬಗೆಹರಿಸಿಕೊಳ್ಳಲಾಗುವುದು ಎಂದು ಚೀನಾ ಗುರುವಾರ ಹೇಳಿದೆ.
ಗಡಿಯಲ್ಲಿ ಸೇನೆ ಹಿಂತೆಗೆಯುವ ಕುರಿತು ಎರಡೂ ದೇಶಗಳು ಸೇನಾ ಹಾಗೂ ರಾಜತಾಂತ್ರಿಕ ಮಾರ್ಗದಲ್ಲಿ ಮಾತುಕತೆಯಲ್ಲಿ ತೊಡಗಿದ್ದು, ಆದಷ್ಟು ಶೀಘ್ರದಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಝುವಾವೊ ಲಿಜಿಯನ್ ತಿಳಿಸಿದ್ದಾರೆ.