ಚೆನ್ನೈ/ವೆಲ್ಲೂರ್: ಲೆಕ್ಕಪತ್ರ ಇರದ ಹಣವನ್ನು ಚುನಾವಣೆಯಲ್ಲಿ ಬಳಸಲಾಗುತ್ತದೆ ಎಂಬ ಸಂಶಯದ ಮೇಲೆ ಆದಾಯ ತೆರಿಗೆ (ಐ.ಟಿ.) ಇಲಾಖೆ ಅಧಿಕಾರಿಗಳು ಡಿಎಂಕೆ ಮುಖಂಡ ದೊರೈಮುರುಗನ್ ಅವರ ಮನೆ ಮೇಲೆ ಶನಿವಾರ ದಾಳಿ ನಡೆಸಿದ್ದಾರೆ.
ಲೆಕ್ಕ ಇರದ ಹಣವನ್ನು ವಶಪಡಿಸಿಕೊಳ್ಳಲಾಗಿದೆಯೇ, ಮೊತ್ತವೆಷ್ಟು ಎಂಬ ಮಾಹಿತಿ ಲಭ್ಯವಾಗಿಲ್ಲ.
ಕರ್ನಾಟಕದಲ್ಲಿ ಕೆಲವು ರಾಜಕಾರಣಿಗಳು ಹಾಗೂ ಅವರ ಬಂಧುಗಳ ಮನೆಯಲ್ಲಿ ದಾಳಿ ನಡೆದು, ರಾಜಕೀಯ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿತ್ತು. ಇದಾದ ಕೆಲವೇ ದಿನಗಳ ಅಂತರದಲ್ಲಿ ರಾಜ್ಯದಲ್ಲಿಯೂ ಐ.ಟಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ.
‘ನನ್ನನ್ನು ಚುನಾವಣೆಯಲ್ಲಿ ಎದುರಿಸಲಾಗದ ಕೆಲವು ರಾಜಕೀಯ ಧುರೀಣರು ಇಂತಹ ದಾಳಿ ನಡೆಸುವ ಷಡ್ಯಂತ್ರಕ್ಕೆ ಮೊರೆ ಹೋಗಿದ್ದಾರೆ. ನನ್ನ ವಿರುದ್ಧದ ಪಿತೂರಿ ಇದು. ಆದರೆ, ಐ.ಟಿ ಅಧಿಕಾರಿಗಳು ಬರಿಗೈಲಿ ತೆರಳಿದ್ದಾರೆ’ ಎಂದು ದೊರೈಮುರುಗನ್ ಪ್ರತಿಕ್ರಿಯಿಸಿದ್ದಾರೆ.