ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ವಿಸರ್ಜಿಸಿದ ರಾಜ್ಯಪಾಲ ಸತ್ಯಪಾಲ ಮಲಿಕ್ ಅವರ ಆದೇಶದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಿಲ್ಲ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಶುಕ್ರವಾರ ಸ್ಪಷ್ಟಪಡಿಸಿದೆ.
ಕಣಿವೆ ರಾಜ್ಯದ ಮತ್ತೊಂದು ಪ್ರಮುಖ ರಾಜಕೀಯ ಪಕ್ಷ ನ್ಯಾಶನಲ್ ಕಾನ್ಫರೆನ್ಸ್ ಕೂಡ ಇದೇ ನಿಲುವು ತೆಳೆದಿದೆ. ‘ಚುನಾವಣೆಗೆ ಸಜ್ಜಾಗುವುದು ಬಿಟ್ಟು ರಾಜಕೀಯ ಪಕ್ಷಗಳ ಎದುರು ಬೇರೆ ದಾರಿ ಇಲ್ಲ’ ಎಂದು ಪಕ್ಷದ ಮುಖ್ಯಸ್ಥ ಒಮರ್ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದಾರೆ.
ರಾಜ್ಯಪಾಲರ ಆದೇಶ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗುವಂತೆ ಮತ್ತು ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ಪೀಪಲ್ಸ್ ಕಾನ್ಫರೆನ್ಸ್ ನಾಯಕ ಸಜಾದ್ ಲೋನ್ ಅವರು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರಿಗೆ ಸವಾಲುಹಾಕಿದ್ದರು.
ಪೀಪಲ್ಸ್ ಕಾನ್ಫರೆನ್ಸ್ ನೇತೃತ್ವದ ತೃತೀಯ ರಂಗವನ್ನು ಅಧಿಕಾರದಿಂದ ದೂರವಿಡುವುದು ಕಾಂಗ್ರೆಸ್, ಎನ್ಸಿ ಮತ್ತು ಪಿಡಿಪಿ ಸೇರಿ ಮಹಾಮೈತ್ರಿಯ ಉದ್ದೇಶವಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಬಿಜೆಪಿ ಜತೆ ಕೈಜೋಡಿಸಿರುವ ತಮ್ಮ ನಿಲುವನ್ನು ಅವರು ಸಮರ್ಥಿಸಿಕೊಂಡಿದ್ದಾರೆ.