ನವದೆಹಲಿ: ನಟ–ರಾಜಕಾರಣಿ ಕಮಲ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಮ್ ಪಕ್ಷಕ್ಕೆ (ಎಂಎನ್ಎಂ) ‘ಬ್ಯಾಟರಿ ಟಾರ್ಚ್’ ಚಿಹ್ನೆಯನ್ನು ಚುನಾವಣಾ ಆಯೋಗ ನೀಡಿದೆ.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಎಂಎನ್ಎಂ ಸೇರಿದಂತೆ 39 ನೋಂದಾಯಿತ ಪಕ್ಷಗಳಿಗೆಚುನಾವಣಾ ಆಯೋಗವು ಚಿಹ್ನೆಗಳನ್ನು ವಿತರಿಸಿದೆ.
ಆಯೋಗಕ್ಕೆ ಟ್ವಿಟರ್ನಲ್ಲಿ ಧನ್ಯವಾದ ತಿಳಿಸಿರುವ ಕಮಲ ಹಾಸನ್, ‘ಇದು ಸೂಕ್ತವಾದ ಚಿಹ್ನೆ. ತಮಿಳುನಾಡು ಹಾಗೂ ಭಾರತದ ರಾಜಕೀಯದಲ್ಲಿ ಪಕ್ಷ ಹೊಸ ಬೆಳಕು ತರಲಿದೆ’ ಎಂದು ಹೇಳಿದ್ದಾರೆ.
ವಿಧಾನಸಭೆ ಉಪಚುನಾವಣೆ: ರಜನಿ ಸ್ಪರ್ಧೆ ಇಲ್ಲ
ವಿಧಾನಸಭಾ ಚುನಾವಣೆಯೇ ಮುಂದಿನ ಗುರಿ ಎಂದು ತಿಂಗಳ ಹಿಂದೆಯಷ್ಟೇ ಘೋಷಿಸಿದ್ದ ನಟ–ರಾಜಕಾರಣಿ ರಜನಿಕಾಂತ್ ತಮ್ಮ ನಿರ್ಧಾರ ಬದಲಿಸಿದ್ದಾರೆ. ತಮಿಳುನಾಡು ವಿಧಾನಸಭೆಯ 21 ಕ್ಷೇತ್ರಗಳಿಗೆ ಮುಂದಿನ ದಿನಗಳಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಭಾನುವಾರ ಅವರು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧೆ ಮಾಡುವುದಿಲ್ಲ ಎಂದು ತಿಂಗಳ ಹಿಂದೆಯೇ ಅವರು ಘೋಷಿಸಿದ್ದರು.
ಉಪಚುನಾವಣೆಯಲ್ಲಿ ಯಾವ ಪಕ್ಷವನ್ನು ಬೆಂಬಲಿಸುತ್ತೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ ‘ಈಗೇನೂ ಹೇಳುವುದಿಲ್ಲ’ ಎಂದು ರಜನಿ ತಿಳಿಸಿದರು.ಫೆ.17ರಂದು ಮಾತನಾಡಿದ್ದ ಅವರು, ತಮಿಳುನಾಡಿನ ನೀರಿನ ವ್ಯಾಜ್ಯಗಳಿಗೆ ಯಾರು ಪೂರ್ಣ ನ್ಯಾಯ ಕೊಡಿಸುತ್ತಾರೋ ಅವರಿಗೆ ತಮ್ಮ ಬೆಂಬಲ ಎಂದು ಹೇಳಿದ್ದರು.
ವೇಣುಗೋಪಾಲ್ ಸ್ಪರ್ಧೆ ಇಲ್ಲ
ಪಕ್ಷದ ಸಂಘಟನಾ ಜವಾಬ್ದಾರಿ ಹೊತ್ತಿರುವ ಕಾರಣ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ನಿರ್ಧರಿಸಿದ್ದಾರೆ.
ಕೇರಳದ ಅಲೆಪ್ಪಿ ಸಂಸದರಾಗಿರುವ ವೇಣುಗೋಪಾಲ್, ಸ್ಪರ್ಧೆ ಮಾಡದಿರುವ ನಿರ್ಧಾರವನ್ನು ಪಕ್ಷದ ವರಿಷ್ಠರ ಗಮನಕ್ಕೆ ತಂದಿರುವುದಾಗಿ ತಿಳಿಸಿದ್ದಾರೆ.
‘ಪಕ್ಷಕ್ಕಾಗಿ ಕೆಲಸ ಮಾಡುವುದು ನನ್ನ ಜವಾಬ್ದಾರಿ. ಕರ್ನಾಟಕ ಕಾಂಗ್ರೆಸ್ನ ಉಸ್ತುವಾರಿಯೂ ನನ್ನ ಹೆಗಲ ಮೇಲಿದೆ. ದೆಹಲಿಯಲ್ಲಿ ಕುಳಿತುಕೊಂಡು ಅಲೆಪ್ಪಿ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿದರೆ ನ್ಯಾಯ ಒದಗಿಸಿದಂತೆ ಆಗುವುದಿಲ್ಲ. ಚುನಾವಣೆಗೆ ಸ್ಪರ್ಧಿಸುವುದು ವೈಯಕ್ತಿಯವಾಗಿ ನನಗೆ ಇಷ್ಟ. ಆದರೆ ಪಕ್ಷದ ಹಿತಾಸಕ್ತಿಯೇ ಅಂತಿಮ’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.